-ಮಹಾರಾಷ್ಟ್ರಕ್ಕೆ ಬಸ್ ಸೇವೆ ಸ್ಥಗಿತ
ಕಲಬುರಗಿ: ಕಳೆದ ಒಂದು ತಿಂಗಳಿನಿಂದ ಇಂದಿನವರೆಗೂ ವಿದೇಶದಿಂದ ಜಿಲ್ಲೆಗೆ ವಾಪಸ್ಸಾದ ನಾಗರಿಕರು ಸ್ವಯಂಪ್ರೇರಿತರಾಗಿ ಕಲಬುರಗಿ ಇ.ಎಸ್.ಐ.ಸಿ. ಆಸ್ಪತ್ರೆಗೆ ಬಂದು ಕೊರೋನಾ ವೈರಸ್ ತಪಾಸಣೆಗೆ ಒಳಪಡಬೇಕು ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಕೊರೊನಾ ವೈರಸ್ ಸೊಂಕು ಹೆಚ್ಚಾಗಿ ಹೊರದೇಶದಿಂದ ಬಂದವರಿಂದಲೆ ಕಂಡು ಬರುತ್ತಿದೆ. ಹೊರದೇಶದಿಂದ ಬಂದವರು ಮನೆಯಲ್ಲಿ ಗೌಪ್ಯವಾಗಿರಬಾರದು. ಕೂಡಲೇ ತಮ್ಮ ಪ್ರವಾಸದ ಇತಿಹಾಸದೊಂದಿಗೆ ಆಸ್ಪತ್ರೆಗೆ ತೆರಳಿ ತಪಾಸಣೆಗೊಳಪಡುವ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಇಲ್ಲದಿದಲ್ಲಿ ಸರ್ಕಾರದಿಂದಲೇ ಹೊರದೇಶದಿಂದ ಮರಳಿದವರ ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳವುದು ಅನಿವಾರ್ಯವಾಗುತ್ತದೆ ಎಂದು ಡಿ.ಸಿ ಶರತ್ ಬಿ. ಅವರು ಎಚ್ಚರಿಕೆ ನೀಡಿದ್ದಾರೆ.
ನೆರೆಯ ಮಹಾರಾಷ್ಟ್ರದಲ್ಲಿಯೂ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ಕಲಬುರಗಿಯಿಂದ ಮಹಾರಾಷ್ಟ್ರದ ವಿವಿಧ ಭಾಗಗಳಿಗೆ ಸಂಚರಿಸುತ್ತಿದ್ದ ಬಸ್ ಗಳನ್ನ ನಿಲ್ಲಿಸಲಾಗಿದೆ. ಇತ್ತ ಮಹಾರಾಷ್ಟ್ರದಿಂದ ಬರುವ ಬಸ್ ಸೇವೆಯನ್ನು ಸಹ ತಡೆಹಿಡಿಯಲಾಗಿದೆ. ಜಿಲ್ಲೆಯ ಬಾರ್, ಮಾಲ್, ಚಿತ್ರಮಂದಿರ ಸೇರಿದಂತೆ ಕಲ್ಯಾಣ ಮಂಟಪ ಬಂದ್ ಮಾಡಲು ಜಿಲ್ಲಾಡಳಿತ ಸೂಚಿಸಿದೆ.