ಬೆಂಗಳೂರು: ರಾಜ್ಯದಲ್ಲಿ ಹಿಂದೂ ಮುಸ್ಲಿಂ ನಡುವಿನ ಧರ್ಮದ ವಾರ್ ಒಂದಿಲ್ಲೊಂದು ರೂಪ ಪಡೆದುಕೊಳ್ಳುತ್ತಿದೆ. ಹಿಜಬ್ನಿಂದ ಶುರುವಾದ ಈ ಧರ್ಮದ ದಂಗಲ್ ಈಗ ವ್ಯಾಪಾರ ವಹಿವಾಟಗಳ ಮೇಲೆ ಪ್ರಭಾವ ಬೀರುವುದಕ್ಕೆ ಶುರು ಮಾಡಿದೆ. ಹಿಂದೂ ಸಂಘಟನೆಗಳು ಒಂದೊಂದೇ ಅಭಿಯಾನಕ್ಕೆ ಕೈಹಾಕುತ್ತಿವೆ. ಈಗ ಖಾಸಗಿ ಬಸ್ ಪ್ರಯಾಣದ ಮೇಲೆ ಅಭಿಯಾನ ಶುರುವಾಗಿದೆ.
ನಿನ್ನೆಯಿಂದ ಹಿಂದೂ ಸಂಘಟನೆಗಳು ಹೊಸ ಆಂದೋಲನ ಶುರು ಮಾಡಿವೆ. ಹಿಂದೂಗಳು ತಾವೂ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಮಾಡುವಾಗ ಮುಸ್ಲಿಂ ಚಾಲಕರ ಮತ್ತು ಮುಸ್ಲಿಂ ಮಾಲೀಕರ ವಾಹನಗಳನ್ನ ಬಳಸಬೇಡಿ ಅಂತಾ ಅಭಿಯಾನ ಶುರು ಮಾಡಿದ್ದಾರೆ. ಅನ್ಯಧರ್ಮೀಯರು ನಮ್ಮ ಧರ್ಮವನ್ನ ನಂಬುವುದಿಲ್ಲ. ಅವರ ಜೊತೆಗೆ ಪ್ರಯಾಣ ಮಾಡುವ ಬದಲು ಹಿಂದೂ ಚಾಲಕರ ಮತ್ತು ಹಿಂದೂ ಮಾಲೀಕರ ವಾಹನಗಳನ್ನೇ ಬಳಸಿ ಅಂತಾ ಹೊಸ ವಾದವನ್ನು ಸೃಷ್ಟಿ ಮಾಡಿದ್ದಾರೆ. ಇದನ್ನೂ ಓದಿ: ಲವ್ ಜಿಹಾದ್ಗೆ ಮುಂದಾದವರ ಮನೆ ಹೊಕ್ಕು ಹೊಡೆಯಬೇಕು: EX MLC ನಾರಾಯಣಸಾ ಭಾಂಡಗೆ
ಇದಕ್ಕೆ ಚಾಲಕರ ವರ್ಗದಲ್ಲಿ ಭಾರೀ ವಿರೋಧ ಶುರುವಾಗಿದೆ. ನಮಗೆ ಪ್ರಯಾಣಿಕರೇ ದೇವರು, ಅವರ ಜಾತಿ, ಧರ್ಮ ಯಾವುದಾದರೇ ನಮಗೇನು. ನಮ್ಮ ಬಸ್ ಹತ್ತುವ ಪ್ರಯಾಣಿಕರನ್ನು ಅವರ ಸ್ಥಳಕ್ಕೆ ಬಿಡುವ ಕಾರ್ಯ ಮಾಡುವವರು ನಾವು. ನಮ್ಮಲ್ಲಿ ಎಲ್ಲ ಜಾತಿಯ ಎಲ್ಲ ಧರ್ಮದವರು ಇದ್ದಾರೆ. ನಾವೂ ಕೆಲಸ ಮಾಡುವ ಜಾಗದಲ್ಲಿ ಧರ್ಮವನ್ನು ತರುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಮುಕ್ತ ಭಾರತ ಮಾಡೋಕೆ ಯಾರಪ್ಪನ ಕೈಯಲ್ಲೂ ಆಗಲ್ಲ: ನಲಪಾಡ್
ಇದು ಕೆಲಸಕ್ಕೆ ಬಾರದವರು ಮಾಡುತ್ತಿರುವ ಕುತಂತ್ರ. ರಾಜ್ಯದಲ್ಲಿ ಏನ್ ಆಗುತ್ತಿದೆ. ಎಲ್ಲ ಬೆಲೆಗಳು ಗಗನಕ್ಕೆ ಏರಿಕೆಯಾಗುತ್ತಿವೆ. ಜನ ಜೀವನ ಮಾಡುವುದೇ ಕಷ್ಟಕರವಾಗಿದೆ. ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆಯಾಗುತ್ತಿದೆ. ಇತಂಹ ಸಮಯದಲ್ಲಿ ಬೇಡದ ವಿಚಾರವನ್ನು ತಂದು ಜನರ ದಿಕ್ಕು ತಪ್ಪಿಸೋ ಕೆಲಸ ಆಗುತ್ತಿದೆ. ನಾವೆಲ್ಲ ಒಂದೇ ಭಾವನೆಯಿಂದ ಕೆಲಸ ಮಾಡುವ ಜನ. ನಮಗೆ ಕಷ್ಟ ಬಂದಾಗ ಹಿಂದೂಗಳು ಬರ್ತಾರೆ. ನಾವೂ ಅವ್ರ ಕಷ್ಟಕ್ಕೆ ಹೋಗ್ತೀವಿ. ಇಲ್ಲಿ ಧರ್ಮದ ಹೆಸರಿನಲ್ಲಿ ನಮ್ಮ ನಡುವೆ ಬಿರುಕು ತರುವ ಕೆಲಸ ನಡೆಯುತ್ತಿದೆ ಎಂದು ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ರಾಜ್ಯದ ಶಾಂತಿಯನ್ನು ಕೆಡಿಸುವ ಕೆಲಸಕ್ಕೆ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ಹಿಂದೂ, ಮುಸ್ಲಿಂ ಅನ್ನುವ ವಿಷ ಬೀಜ ಭಿತ್ತನೆ ಮಾಡಿ ಅದರ ಲಾಭ ಮಾಡಿಕೊಳ್ಳಲು ಒಂದಿಲ್ಲೊಂದು ತಂತ್ರಗಳನ್ನು ಕೆಲವರು ಮಾಡುತ್ತಿದ್ದಾರೆ. ಜನ ಮಾತ್ರ ಇದೆಲ್ಲ ಬೇಕಾ ಅಂತ ತಮ್ಮ ಪಾಡಿಗೆ ತಾವು ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದ್ದಾರೆ. ಇನ್ನಾದರೂ ಈ ಅಭಿಯಾನಗಳು ಕೊನೆಯಾಗಿ ಜನ ನೆಮ್ಮದಿಯಿಂದ ಸಹಬಾಳ್ವೆ ಮಾಡುವಂತೆ ಆಗಲಿ.