ಬೆಳಗಾವಿ: ಬಸ್ ಯಾಕೆ ನಿಲ್ಲಿಸಲಿಲ್ಲ ಎಂದು ಕೇಳಿದ್ದಕ್ಕೆ ಕೆಎಸ್ಆರ್ಟಿಸಿ ಬಸ್ ನಿರ್ವಾಹಕ ಪ್ರಯಾಣಿಕನನ್ನು ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ನಡೆದಿದೆ.
ಗೋಕಾಕ್ ಪಟ್ಟಣದಿಂದ ಅಥಣಿ ಪಟ್ಟಣಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಮುಗಳಖೋಡ ಪಟ್ಟಣದ ಬಸ್ ನಿಲ್ದಾಣದಲ್ಲಿ ನಿಲುಗಡೆಯಾಗಿ ಮುಂದೆ ತೆರಳಬೇಕು. ಹೀಗಾಗಿ ಧಾರವಾಡ ಮೂಲದ ಮೊಬೈಲ್ ಟವರ್ ದುರಸ್ಥಿ ಮಾಡುವ ಕಾರ್ಮಿಕ ಬಸ್ ನಿಲ್ದಾಣದ ಒಂದು ಕಿ.ಮೀ ಹಿಂದೆಯೇ ಬಸ್ ನಿಲುಗಡೆ ಮಾಡುವಂತೆ ಕೋರಿದ್ದಾನೆ. ಆದರೆ ಇದಕ್ಕೆ ಒಪ್ಪದ ಕಂಡಕ್ಟರ್ ಶ್ರೀಮಂತ ಮುತ್ತೆನ್ನವರ ಹಾಗೂ ಕಾರ್ಮಿಕನ ನಡುವೆ ವಾಗ್ವಾದ ನಡೆದಿದೆ.
ಬಸ್ ನಿಲ್ದಾಣ ಬರುತ್ತಿದ್ದಂತೆ ನಿರ್ವಾಹಕ ತನ್ನ ಗೂಂಡಾಗಿರಿ ಪ್ರದರ್ಶಿಸಿದ್ದು ಪ್ರಯಾಣಿಕನ ಬಟ್ಟೆ ಬಿಚ್ಚಿ ನಡು ರಸ್ತೆಯಲ್ಲೇ ಹಲ್ಲೆ ನಡೆಸಿದ್ದಾನೆ. ಎರಡು ದಿನಗಳ ಹಿಂದೆ ನಡೆದ ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ನಿರ್ವಾಹಕನ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಬಳಿಕ ಇಬ್ಬರಿಗೂ ರಾಜಿ ಸಂಧಾನ ಮಾಡಿಸಿ ಹಾರೋಗೇರಿ ಪೊಲೀಸರು ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv