ಮಡಿಕೇರಿ: ಚಾಲಕನ ನಿಯಂತ್ರಣ ಕಳೆದುಕೊಂಡು ತೋಟದ ಒಳಗೆ ನುಗ್ಗಿದ್ದ ಕಾರನ್ನು ಕ್ರೇನ್ ಮೂಲಕ ತರುತ್ತಿದ್ದಾಗ ಕೆಎಸ್ಆರ್ ಟಿಸಿ ಬಸ್ಗೆ ಡಿಕ್ಕಿಯಾದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶಾಂತಗೇರಿ ಸಮೀಪದ ಕೂರ್ಗಳ್ಳಿ ತೋಟದಲ್ಲಿ ನಡೆದಿದೆ.
ಕಾರು ಚಾಲಕ ತೀವ್ರವಾಗಿ ಗಾಯಗೊಂಡಿದ್ದು, ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಕೆ.ಎ.47 ಎಂ. 6446 ಕಾರ್ ಕಳೆದ ರಾತ್ರಿ 11.30ರ ಸುಮಾರಿಗೆ ಚಾಲಕನ ನಿಯಂತ್ರಣ ಕಳೆದುಕೊಂಡು ಹೆದ್ದಾರಿ ಬದಿಯಲ್ಲಿರುವ ಶಾಂತಗೇರಿ ಸಮೀಪದ ಕೂರ್ಗಳ್ಳಿ ತೋಟದೊಳಗೆ ನುಗ್ಗಿದೆ. ಪರಿಣಾಮ ಚಾಲಕ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.
ಕಾರಿನಲ್ಲಿದ್ದ ಇನ್ನುಳಿದವರು ತರುಚಿದ ಗಾಯಕ್ಕೊಳಗಾಗಿದ್ದಾರೆ. ಬಸ್ ಗೆ ಡಿಕ್ಕಿ ಹೊಡೆದು ತೋಟದೊಳಗೆ ನುಗ್ಗಿದ್ದ ಈ ಕಾರನ್ನು ಇಂದು ಬೆಳಗ್ಗೆ ಕ್ರೇನ್ ಸಹಾಯದಿಂದ ಹೊರಕ್ಕೆ ತಂದು ಹೆದ್ದಾರಿ ಮೂಲಕ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ತರಲಾಗುತ್ತಿತ್ತು. ಆದರೆ ತೋಟದ ಒಳಗೆ ಬಿದ್ದ ಸ್ಥಳದಿಂದ ಅನತಿ ದೂರದಲ್ಲಿ ಕೊಂಡೊಯ್ಯುತ್ತಿದ್ದಾಗ ನೇತಾಡುತ್ತಿದ್ದ ಕಾರಿನ ಮುಂಭಾಗದಲ್ಲಿ ಕಟ್ಟಿದ್ದ ಕ್ರೇನ್ ನ ಹಗ್ಗ ಕಳಚಿಕೊಂಡಿದೆ.
ಇದರಿಂದ ಕ್ರೇನ್ ನ ಮುಂಭಾಗದಲ್ಲಿದ್ದ ಕಾರು ರಸ್ತೆಯ ಬಲ ಭಾಗಕ್ಕೆ ತಿರುಗಿತ್ತಲ್ಲದೇ ಸುಂಟಿಕೊಪ್ಪದಿಂದ ಮಲ್ಲಪುರಂಗೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ ಬಸ್ (ಕೆ.ಎ. 19ಎಫ್ 3315)ನ ಬಲಭಾಗಕ್ಕೆ ಡಿಕ್ಕಿ ಹೊಡೆದಿದೆ. ಬಸ್ ನಲ್ಲಿದ್ದ 15 ಮಂದಿ ಪ್ರಯಾಣಿಕರು ಯಾವುದೇ ಗಾಯಕ್ಕೊಳಗಾಗದೇ ಸಂಭವಿಸಬಹುದಾಗಿದ್ದ ಅನಾಹುತದಿಂದ ಪಾರಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv