ಶಿವಮೊಗ್ಗ: ಸರ್ಕಾರಿ ನೌಕರರಿಗೆ ಬಂಪರ್ ಆಫರ್ ನೀಡಲು ರಾಜ್ಯ ಸರ್ಕಾರಿ ನೌಕರರ ಸಂಘ ಮುಂದಾಗಿದೆ.
ಇದುವರೆಗೆ ಸೈನಿಕರಿಗೆ ಮಿಲಿಟರಿ ಕ್ಯಾಂಟೀನ್, ಪೊಲೀಸರಿಗೆ ಪೊಲೀಸ್ ಕ್ಯಾಂಟೀನ್ ಮೂಲಕ ರಿಯಾಯಿತಿ ದರದಲ್ಲಿ ದಿನಬಳಕೆ ವಸ್ತುಗಳನ್ನು ನೀಡಲಾಗಿತ್ತು. ಇದೇ ಮಾದರಿಯಲ್ಲಿ ಸರ್ಕಾರಿ ನೌಕರರ ಕ್ಯಾಂಟೀನ್ ಆರಂಭಿಸಿ ಸರ್ಕಾರಿ ನೌಕರರಿಗೆ ಶೇಕಡಾ 10 ರಿಂದ 40ರಷ್ಟು ರಿಯಾಯಿತಿ ದರದಲ್ಲಿ ದಿನಬಳಕೆ ವಸ್ತುಗಳನ್ನು ನೀಡಲು ಸರ್ಕಾರಿ ನೌಕರರ ಸಂಘ ತೀರ್ಮಾನಿಸಿದೆ.
ನಗರದಲ್ಲಿ ಇಂದು ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು, ಪ್ರಾಯೋಗಿಕವಾಗಿ ಆರಂಭದಲ್ಲಿ ಶಿವಮೊಗ್ಗದಲ್ಲಿ ಸರ್ಕಾರಿ ನೌಕರರ ಕ್ಯಾಂಟೀನ್ ಆರಂಭಿಸಲಾಗುವುದು. ಬಳಿಕ ಇತರೆ ಜಿಲ್ಲೆಗಳಿಗೂ ಕ್ಯಾಂಟೀನ್ ವಿಸ್ತರಿಸಲಾಗುವುದು ಎಂದು ಹೇಳಿದರು.