ಬಳ್ಳಾರಿ: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ ರಾಜ್ಯದಲ್ಲಿ ಕಮಲ ಅರಳಲು ಸಹಾಯ ಮಾಡಿದ ಕ್ಷೇತ್ರದಲ್ಲಿ ಮತ್ತೆ ಚುನಾವಣೆ ನಿಗದಿಯಾಗಿದೆ. ಕೋರ್ಟ್ ಆದೇಶ ಅಂದುಕೊಂಡಂತೆ ಬಂದರೆ ಮುಂದಿನ ತಿಂಗಳಲ್ಲಿ 15 ಅನರ್ಹ ಶಾಸಕರ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ. ಆದರೆ ಮುಖ್ಯಮಂತ್ರಿ ಮಾತ್ರ ಗೆಲ್ಲಲೇ ಬೇಕು ಅನ್ನೋ ನಿಟ್ಟಿನಲ್ಲಿ ಈ ಎಲ್ಲಾ ಕ್ಷೇತ್ರಗಳಿಗೆ ಭರ್ಜರಿ ಗಿಫ್ಟ್ ಕೊಡುತ್ತಿದ್ದಾರೆ. ಅದರಲ್ಲಿ ವಿಜಯನಗರಕ್ಕೆ ಸುಮಾರು 284 ಕೋಟಿ ಅನುದಾನ ಬಿಡುಗಡೆ ಮಾಡಿ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾದ ಅನರ್ಹ ಶಾಸಕರಿಗೆ ಸಿಎಂ ಭರ್ಜರಿ ಗಿಫ್ಟ್ ನೀಡುತ್ತಿದ್ದಾರೆ. ಈಗಾಗಲೇ ಐವರು ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಸಂಚರಿಸಿ ಬಂದಿರೋ ಸಿಎಂ ಯಡಿಯೂರಪ್ಪ, ಈಗ ಆನಂದ್ ಸಿಂಗ್ ಕ್ಷೇತ್ರ ಹೊಸಪೇಟೆಗೆ ಬರೋಬ್ಬರಿ 243 ಕೋಟಿ ರೂ. ಅನುದಾನ ನೀಡಿದ್ದಾರೆ. ಕಳೆದ ಒಂದು ವಾರದ ಹಿಂದೆ ಸುಮಾರು 40 ಕೋಟಿ ರೂ. ಅನುದಾನವನ್ನೂ ನೀಡಿದ್ರು.
ಆನಂದ್ ಸಿಂಗ್ ಕ್ಷೇತ್ರಕ್ಕೆ ಹೋಗೋದಿಕ್ಕೆ ಆಗಿಲ್ವೋ ಏನೋ.. ಜೊತೆಗೆ ನೀತಿ ಸಂಹಿತೆ ಬಂದ ಕಾರಣವೋ ಏನೋ ಪ್ರಚಾರ ಮಾಡಿಲ್ಲ. ಬದಲಿಗೆ, ಚುನಾವಣೆ ನೀತಿಸಂಹಿತೆಯ ಹಿಂದಿನ ದಿನ ಸುಮಾರು 243 ಕೋಟಿ ಅನುದಾನ ನೀಡಿದ್ದಾರೆ. ಹೊಸಪೇಟೆಗೆ ಕುಡಿಯುವ ನೀರು ಯೋಜನೆಗೆ 242 ಕೋಟಿ ರೂ. ಅನುದಾನ ನೀಡಿದ್ದಾರೆ. ಪ್ರಸಕ್ತ ವರ್ಷದಲ್ಲಿ 75 ಕೋಟಿ ರೂ. ಅನುದಾನ ಸಿಗಲಿದೆ. ತುಂಗಾಭದ್ರಾ ನದಿಯಿಂದ 18 ಕೆರೆ ಮತ್ತು 4 ಚೆಕ್ ಡ್ಯಾಂಗಳಿಗೆ ನೀರು ತುಂಬಿಸುವ ಯೋಜನೆಗೆ ಈ ಅನುದಾನವನ್ನ ಸಿಎಂ ಬಿಎಸ್ ವೈ ಬಿಡುಗಡೆ ಮಾಡಿದ್ದಾರೆ.
ಆದರೆ ಕಾಂಗ್ರೆಸ್ ಶಾಸಕರಿಗೆ ನೀಡಿದ್ದ ಅನುದಾನವನ್ನು ಹಿಂಪಡೆದು ಅನರ್ಹರ ಕ್ಷೇತ್ರಕ್ಕೆ ನೀಡುತ್ತಿದ್ದಾರೆ. ಸಿಎಂ ಕೇವಲ ಅನರ್ಹ ಕ್ಷೇತ್ರದ ಮುಖ್ಯಮಂತ್ರಿನೋ ಅಥವಾ 6 ಕೋಟಿ ಜನರ ಮುಖ್ಯಮಂತ್ರಿನೋ ಅಂತ ಬಳ್ಳಾರಿ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.
ಒಟಿನಲ್ಲಿ 15 ಅನರ್ಹ ಕ್ಷೇತ್ರಗಳಲ್ಲಿ 12 ಕ್ಷೇತ್ರಗಳನ್ನಾದ್ರೂ ಗೆದ್ದು ಸರ್ಕಾರವನ್ನು ಉಳಿಸಿಕೊಳ್ಳುವ ತವಕದಲ್ಲಿ ಸಿಎಂ ಇದ್ದಾರೆ. ಆದರೆ ಮತದಾರರು ಈ ಎಲ್ಲ ವಿಷಯಗಳನ್ನು ಗಮನಿಸುತ್ತಿದ್ದು, ವಿಜಯ ಮಾಲೆ ಯಾರಿಗೆ ಹಾಕಲಿದ್ದಾರೆ ಕಾದು ನೋಡಬೇಕು.