ಧಾರವಾಡ: ನಗರದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಗಾಗಿ ಕಾದು ಕುಳಿತಿದ್ದ ಗರ್ಭಿಣಿಗೆ ಶಾಕ್ ಆಗಿದೆ.
ಮಂಗಳವಾರ ನಿರ್ಮಾಣ ಹಂತದ ಕಟ್ಟಡವೊಂದು ಧರೆಗುಳಿದಿದ್ದು, ಕಟ್ಟಡದ ಅವಶೇಷಗಳಡಿ ಅಶೀತ್ ಹಿರೇಮಠ ಸಿಲುಕಿದ್ದರು. ಹೀಗಾಗಿ ಪತಿ ಕಾಣದೆ ಗರ್ಭಿಣಿ ಪತ್ನಿ ಕಂಗಾಲಾಗಿದ್ದರು. ಅಲ್ಲದೆ ಪತಿಯನ್ನು ಹೊರತರುವಂತೆ ಪತ್ನಿ ರಕ್ಷಣಾ ಸಿಬ್ಬಂದಿಗೆ ಪರಪರಿಯಾಗಿ ಬೇಡಿಕೊಳ್ಳುತ್ತಿದ್ದರು. ಆದ್ರೆ ಇದೀಗ ಅಶೀತ್ ಮೃತಪಟ್ಟಿದ್ದಾರೆ ಎಂದು ಸುದ್ದಿ ತಿಳಿದ ಕೂಡಲೇ ಪತ್ನಿಗೆ ಗರಬಡಿದಂತಾಗಿದೆ. ಇದನ್ನೂ ಓದಿ: ಧಾರವಾಡ ದುರಂತ – ಮೂವರನ್ನು ಕಾಪಾಡಿ ಸಾವನ್ನೇ ಗೆದ್ದು ಬಂದ ಕಾರ್ಮಿಕ
ಅಶೀತ್ ನಿರ್ಮಾಣ ಹಂತದ ಕಟ್ಟಡದಲ್ಲಿ ಕಳೆದ ಮೂರು ತಿಂಗಳಿನಿಂದ ಪೇಂಟ್ ಅಂಗಡಿ ಇಟ್ಟುಕೊಂಡಿದ್ದರು. ನಿನ್ನೆಯೂ ತನ್ನ ಅಂಗಡಿಯಲ್ಲಿದ್ದ ಅಶೀತ್ ಏಕಾಏಕಿ ಕುಸಿದುಬಿದ್ದ ಕಟ್ಟಡದ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿದ್ದರು. ಇದರಿಂದ ಅಶೀತ್ ಪತ್ನಿ ಹಾಗೂ ಕುಟುಂಬಸ್ಥರು ಆತಂಕಕ್ಕೀಡಾಗಿದ್ದರು.
ಇತ್ತ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿತ್ತು. ಕಟ್ಟಡದ ಅವಶೇಷಗಳಡಿಯಿಂದ ಹೊರತೆಗೆದ ಎಲ್ಲರನ್ನೂ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗುತ್ತಿತ್ತು. ಹೀಗಾಗಿ ಅಶೀತ್ ಅವರನ್ನು ಕೂಡ ಕರೆತರುತ್ತಾರೆಂದು ಕುಟುಂಬ ಆಸ್ಪತ್ರೆಯಲ್ಲಿಯೇ ಕಣ್ಣೀರು ಹಾಕುತ್ತಾ ಕಾದು ಕುಳಿತಿತ್ತು. ಇದನ್ನೂ ಓದಿ: ಸತತ 11 ಗಂಟೆಗಳ ಕಾರ್ಯಾಚರಣೆಯಲ್ಲಿ ಬದುಕಿ ಬಂದ ಶ್ವಾನ
ಕೊನೆಗೂ ಸತತ 14 ಗಂಟೆಗಳ ಕಾರ್ಯಾಚರಣೆ ಮಾಡಿ ಕಟ್ಟಡದಡಿಯಿಂದ ಅವರನ್ನು ಹೊರ ತೆಗೆಯಲಾಯಿತಾದ್ರೂ ಅಶೀತ್ ಮಾತ್ರ ಬದುಕುಳಿಯಲಿಲ್ಲ. ಇದರಿಂದ ಪತಿ ಬರುವಿಕೆಗಾಗಿ ಕಾದು ಕುಳಿತಿದ್ದ ಗರ್ಭಿಣಿ ಪತ್ನಿ ಹಾಗೂ ಕುಟುಂಬಸ್ಥರಿಗೆ ಆಕಾಶವೇ ಕಳಚಿಬಿದ್ದಂತಾಗಿದೆ.
https://www.youtube.com/watch?v=WhgyTU-1oN8