ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಕೇರಳದ ಪ್ರಸಿದ್ಧ ದೇವಾಲಯದಲ್ಲಿ ಯಜ್ಞ-ಯಾಗಾದಿಗಳನ್ನು ನೇರವೇರಿಸುತ್ತಿದ್ದಾರೆ.
ಕೈತಪ್ಪಿರುವ ಅಧಿಕಾರದ ಗದ್ದುಗೆಯನ್ನು ಮತ್ತೊಮ್ಮೆ ಪಡೆಯಬೇಕೆಂದಿರುವ ಬಿ.ಎಸ್.ಯಡಿಯೂರಪ್ಪನವರು, ಕೇರಳದ ಕಣ್ಣೂರಿನ ಅರಣ್ಯ ಪ್ರದೇಶದಲ್ಲಿರುವ ಪ್ರಸಿದ್ಧ ಶಿವನ ದೇವಾಲಯವಾಗಿರುವ ರಾಜರಾಜೇಶ್ವರ ದೇವಾಲಯದಲ್ಲಿ ಕಳೆದ ಅಮಾವಸ್ಯೆಯ ದಿನ ಶನಿವಾರ ಹಾಗೂ ಭಾನುವಾರದಂದು ವಿಶೇಷ ಯಜ್ಞ-ಯಾಗಾದಿಗಳನ್ನು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಪರಿಣಾಮವಾಗಿಯೇ ಭಾನುವಾರದ ನಂತರ ರಾಜ್ಯ ರಾಜಕಾರಣದಲ್ಲಿನ ಆಗುತ್ತಿರುವ ಬದಲಾವಣೆಗಳಿಗೆ ಕಾರಣವಾಗಿದೆ ಎನ್ನಲಾಗಿದೆ.
ಕಣ್ಣೂರಿನ ಪುರಾತನ ಹಾಗೂ ಪ್ರಸಿದ್ಧ ದೇವಾಲಯವಾಗಿರುವ ರಾಜರಾಜೇಶ್ವರ ದೇವಾಲಯದಲ್ಲಿ ಕಳೆದ ಶನಿವಾರ ಹಾಗೂ ಭಾನುವಾರ ಎರಡು ದಿನಗಳ ಕಾಲ ತಂತ್ರಿಗಳಿಂದ ನಿರಂತರ ಯಾಗ ನಡೆದಿದ್ದು, ಪ್ರಮುಖವಾಗಿ ರಾಜಸೂಯ ಯಾಗ, ಶತ್ರು ಮರ್ಧಿನಿ ಯಾಗ ಹಾಗೂ ವಶೀಕರಣ ಯಾಗವನ್ನು ಬಿಎಸ್ವೈ ನೆರವೇರಿಸಿದ್ದಾರೆ. ಅಧಿಕಾರವನ್ನು ಹಿಡಿಯಲು ಮಾಡಿಸುವ ಯಾಗವೇ ರಾಜಸೂಯ ಯಾಗ, ಎದುರಾಳಿಗಳನ್ನು ಮಟ್ಟಹಾಕಿ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಿಕೊಳ್ಳಲು ಮಾಡುವ ಯಾಗವೇ ಶತ್ರು ಮರ್ಧಿನಿ ಯಾಗ ಹಾಗೂ ವಶೀಕರಣ ಯಾಗವನ್ನು ಸಹ ಮಾಡಿಸಿದ್ದಾರಂತೆ.
ಇದಲ್ಲದೇ ನವರಾತ್ರಿಯ ವೇಳೆಯೂ ಒಂಬತ್ತು ದಿನಗಳ ವಿಶೇಷ ಯಾಗ ನಡೆಸುವಂತೆ ಸೂಚಿಸಿದ್ದು, ಮೈಸೂರಿನ ಚಾಮುಂಡಿ ಬೆಟ್ಟದಿಂದ ಕಳಸ ತೆಗೆದುಕೊಂಡು ಹೋಗಿ ಯಾಗ ನೆರವೇರಿಸುತ್ತಾರೆ. ಅಲ್ಲದೇ ದಸರಾ ವೇಳೆ ತಂತ್ರಿಗಳು ನವಶಕ್ತಿಯನ್ನು ಆರಾಧನೆ ಮಾಡಿ ಯಾಗ ನಡೆಸುತ್ತಾರೆ.
ಯಡಿಯೂರಪ್ಪನವರು ಆಗಾಗ ಈ ದೇವಸ್ಥಾನಕ್ಕೆ ಹೋಗಿ ಬರುತ್ತಲೇ ಇರುತ್ತಾರೆ. ಅಲ್ಲದೇ ಕೆಲ ತಿಂಗಳ ಹಿಂದೆಯೂ ದೇವಸ್ಥಾನಕ್ಕೆ ಭೇಟಿ ನೀಡಿದ್ದರ ಬಗ್ಗೆ ದೇವಸ್ಥಾನದ ವೆಬ್ಸೈಟ್ಗಳಲ್ಲಿ ಮಾಹಿತಿ ಉಲ್ಲೇಖಿಸಿಲಾಗಿದೆ. ಈ ಹಿಂದೆಯೂ ಸಹ ಆನೆಯನ್ನು ದೇವಸ್ಥಾನಕ್ಕೆ ನೀಡಿದ್ದರು. ಇವರಲ್ಲದೆ ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜಯಲಲಿತಾರವರು ಸಹ ಆನೆಯನ್ನು ನೀಡಿರುವುದಾಗಿ ಉಲ್ಲೇಖವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv