ರಾಯಚೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಪರೇಷನ್ ಡೀಲ್ ಆಡಿಯೋ ಬಿಡುಗಡೆಯಾಗಿ ಏಕಾಂಗಿ ಆಗಿದ್ದಾರೆ. ಇದಕ್ಕೆಲ್ಲಾ ಕಾರಣ ದೇವದುರ್ಗದ ಶಾಸಕ ಶಿವನಗೌಡ ನಾಯಕ್ರ ಆತುರ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಿಎಸ್ ಯಡಿಯೂರಪ್ಪ ದೈವಭಕ್ತರು, ಭವಿಷ್ಯವಾಣಿಗಳನ್ನು ನಂಬುತ್ತಾರೆ. ಆದ್ರೆ ಶಾಸಕ ಶಿವನಗೌಡ ನಾಯಕ್ ಹಾಗಲ್ಲ, ಭವಿಷ್ಯವಾಣಿಯನ್ನು ನಂಬುವದರ ಜೊತೆಗೆ ಅದನ್ನು ನಿಜ ಮಾಡಲು ಕೂಡಲೇ ಕಾರ್ಯಪ್ರವೃತ್ತರಾಗ್ತಾರೆ. ಅವರ ಅತೀ ಉತ್ಸಾಹವೇ ಯಡಿಯೂರಪ್ಪರನ್ನು ಇವತ್ತು ಒಂಟಿಯನ್ನಾಗಿ ಮಾಡಿದೆ ಎಂದು ಹೇಳಲಾಗುತ್ತಿದೆ.
ದೇವದುರ್ಗ ತಾಲೂಕಿನ ಮುಂಡರಗಿಯ ಶಿವರಾಯಸ್ವಾಮಿ ದೇವಾಲಯದ ಅರ್ಚಕ ಶಿವಣ್ಣ ತಾತ ಅಂದ್ರೆ ಶಿವನಗೌಡರಿಗೆ ಎಲ್ಲಿಲ್ಲದ ನಂಬಿಕೆ. ಅವರು ಈವರೆಗೆ ಹೇಳಿದ ಎಲ್ಲಾ ಭವಿಷ್ಯವಾಣಿಗಳು ಈವರೆಗೆ ಸುಳ್ಳಾಗಿಲ್ಲ. ಎಲ್ಲವೂ ನಿಜವಾಗಿದೆ. ಹೀಗಾಗಿ ಬಜೆಟ್ ಅಧಿವೇಶನವಿದ್ದರೂ ಫೆಬ್ರವರಿ 7ರಂದು ಸಂಜೆ 5:30ಕ್ಕೆ ಶಿವನಗೌಡನ ಜೊತೆ ಏಕಾಏಕಿ ಹೆಲಿಕಾಪ್ಟರ್ನಲ್ಲಿ ರಾಯಚೂರಿನ ದೇವದುರ್ಗದ ಅರಕೇರಾಕ್ಕೆ ಬಂದ ಯಡಿಯೂರಪ್ಪ ರಾತ್ರಿ ವೇಳೆ ಶಿವಣ್ಣ ತಾತನನ್ನ ಭೇಟಿಯಾಗಿ ಆಶೀರ್ವಾದ ಪಡೆದರು. ಇದೇ ವೇಳೆ ಶಿವನಗೌಡ ನಾಯಕ್ ಓರ್ವ ಶಾಸಕನನ್ನು ಸೆಳೆದ್ರೆ ಬಿಎಸ್ ಯಡಿಯೂರಪ್ಪ ಸಿಎಂ ಆಗ್ತಾರೆ ಅಂತ ಭವಿಷ್ಯ ನುಡಿದಿದ್ದರು ಎನ್ನಲಾಗಿದೆ.
ಭವಿಷ್ಯವಾಣಿ ಕೇಳುತ್ತಿದ್ದಂತೆ ಗುರುಮಿಠಕಲ್ ಶಾಸಕರ ಪುತ್ರ ಶರಣಗೌಡಗೆ ದುಂಬಾಲು ಬಿದ್ದ ಶಿವನಗೌಡ ನಾಯಕ್, ದೇವದುರ್ಗದ ಪ್ರವಾಸಿ ಮಂದಿರಕ್ಕೆ ಕರೆಸಿಕೊಂಡಿದ್ದಾರೆ. ಮಧ್ಯರಾತ್ರಿ ಗಾಢ ನಿದ್ರೆಯಲ್ಲಿದ್ದ ಯಡಿಯೂರಪ್ಪರನ್ನ ಸ್ವತಃ ಶಿವನಗೌಡ ನಾಯಕ್ ಕಾಲುಮುಟ್ಟಿ ಎಬ್ಬಿಸಿದ್ದಾರೆ. ಬಳಿಕ ಎದ್ದ ಯಡಿಯೂಪರಪ್ಪ ಶಿವನಗೌಡ ಮೇಲಿನ ನಂಬಿಕೆಯಿಂದ ಬಿ.ಎಸ್ ಯಡಿಯೂರಪ್ಪ ಜೊತೆ ಮಾತನಾಡಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ಶಿವನಗೌಡರಿಗೆ ಭವಿಷ್ಯ ನಿಜ ಮಾಡೋ ಆತುರ, ಬಿಎಸ್ ಯಡಿಯೂರಪ್ಪರಿಗೆ ನಿದ್ದೆಯ ಮಂಪರು. ಮಾತುಕತೆಗೆ ಬಂದ ಶರಣಗೌಡ ಏನೇನ್ ಸಿದ್ಧತೆ ಮಾಡಿಕೊಂಡು ಬಂದಿದ್ದಾರೆ. ಆಡಿಯೋ ಏನಾದ್ರೂ ರೆಕಾರ್ಡ್ ಮಾಡ್ತಾರೋ ಇಲ್ವೋ ಅನ್ನೋದನ್ನ ನೋಡದೇ ಮಾತುಕತೆ ನಡೆಸಿದ್ದಾರೆ. ಇದೇ ಯಡವಟ್ಟು ಇವತ್ತು ಬಿಎಸ್ ಯಡಿಯೂರಪ್ಪರನ್ನು ಏಕಾಂಗಿಯನ್ನಾಗಿ ಮಾಡಿದೆ. ಇದನ್ನ ರೆಕಾರ್ಡ್ ಮಾಡಿಕೊಂಡಿದ್ದ ಶರಣಗೌಡ ಯಡಿಯೂರಪ್ಪ ಆಪರೇಷನ್ನ್ನು ಬಹಿರಂಗಗೊಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv