ಬೆಂಗಳೂರು: ವಿಶ್ವಾಸ ಮತಯಾಚನೆ ಮಾಡುವ ಸಂದರ್ಭದಲ್ಲಿ ಸದನಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ. ಆದರೆ ನನ್ನ ಫೋನ್ ಸ್ವಿಚ್ ಆಫ್ ಇತ್ತು, ಈ ಬಗ್ಗೆ ಮಾಹಿತಿ ಲಭಿಸದ ಹಿನ್ನೆಲೆಯಲ್ಲಿ ಘಟನೆ ನಡೆದಿದೆ. ಆದರೆ ಮುಂದಿನ ಅವಧಿಯಲ್ಲಿ ತಟಸ್ಥರಾಗಿಯೇ ಇರುತ್ತೇನೆ ವಿನಾ: ಬಿಜೆಪಿಗೆ ಬೆಂಬಲ ನೀಡುವುದಿಲ್ಲ ಎಂದು ಕೊಳ್ಳೇಗಾಲ ಬಿಎಸ್ಪಿ ಶಾಸಕ ಎನ್ ಮಹೇಶ್ ಸ್ಪಷ್ಟಪಡಿಸಿದ್ದಾರೆ.
ಮೈತ್ರಿ ಸರ್ಕಾರ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಹಾಜರಾಗದ ಹಿನ್ನೆಲೆಯಲ್ಲಿ ಬಿಎಸ್ಪಿ ಹೈಕಮಾಂಡ್ ಮಾಯಾವತಿ ಅವರು ಮಹೇಶ್ ಅವರನ್ನು ಉಚ್ಛಾಟನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಎನ್ ಮಹೇಶ್ ಅವರು, ವಿಧಾನಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಕ್ಕೆ ಬೆಂಬಲ ನೀಡಿದ್ದೇವು. ಆಗ ನನಗೆ ಸಚಿವ ಸ್ಥಾನ ಕೂಡ 4 ತಿಂಗಳು ನೀಡಿದ್ದರು. ಆದರೆ ಆ ಬಳಿಕ ರಾಷ್ಟ್ರೀಯ ಅಧ್ಯಕ್ಷರ ಆದೇಶದ ಮೇರೆಗೆ ರಾಜೀನಾಮೆ ನೀಡಿದ್ದೆ. ಅಂದು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದೆ. ವಿಶ್ವಾಸ ಮತಯಾಚನೆ ಹಿನ್ನೆಲೆಯಲ್ಲಿ ನನಗೆ ತಟಸ್ಥರಾಗಿ ಇರುವಂತೆ ಹೇಳಿದ್ದರು. ಆದ್ದರಿಂದ ಕ್ಷೇತ್ರದಿಂದ ಹೊರಗೆ ಇದ್ದೆ ಎಂದು ತಿಳಿಸಿದರು.
ಜುಲೈ 15ರ ವರೆಗೂ ಜನರೊಂದಿಗೆ ಕ್ಷೇತ್ರದಲ್ಲೇ ಇದ್ದು ಪಕ್ಷದ ಸಂಘಟನೆ ಮಾಡಿದ್ದೆ. ಇದಕ್ಕೂ ಮುನ್ನ ರಾಷ್ಟ್ರಿಯ ಕಾರ್ಯಕಾರಿಣಿ ಸಭೆಯಲ್ಲಿ ಸಮ್ಮಿಶ್ರ ಸರ್ಕಾರ ಬೆಂಬಲ ನೀಡುವ ಬಗ್ಗೆ ಮಾತನಾಡಿದ್ದೆ. ಈ ಸಂದರ್ಭದಲ್ಲಿ ನಾನು ನನಗೆ ಸ್ವತಂತ್ರ್ಯವಾಗಿ ಇರುವಂತೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ವಿಧಾನಸೌಧಲ್ಲಿ ನನಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲು ಸ್ಪೀಕರ್ ಅವರಿಗೂ ಮನವಿ ಮಾಡಿದ್ದೆ. ಪಕ್ಷದ ರಾಜ್ಯ ಉಸ್ತುವಾರಿ ಡಾ.ಆಶೋಕ್ ಸಿದ್ಧಾರ್ಥ ಅವರಿಗೂ ಈ ಬಗ್ಗೆ ಮಾಹಿತಿ ನೀಡಿ ವಿಶ್ವಾತ ಮತಯಾಚನೆ ಬಗ್ಗೆಯೂ ಚರ್ಚೆ ನಡೆಸಿದ್ದೆ. ಈ ಸಂದರ್ಭದಲ್ಲಿ ನನಗೆ ತಟಸ್ಥರಾಗಿರುವಂತೆ ಸೂಚನೆ ನೀಡಿದ್ದ ಕಾರಣ ಸದನಕ್ಕೆ ಗೈರಾಗುವ ಬಗ್ಗೆ ಮಾಹಿತಿ ನೀಡಿದ್ದೆ. ನನ್ನ ಪಕ್ಷದ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಎರಡು ದಿನ ಅಲ್ಲಿಯೇ ಇದ್ದೆ ಎಂದರು.
कर्नाटक में कुमारस्वामी सरकार के समर्थन में वोट देने के पार्टी हाईकमान के निर्देश का उल्लंघन करके बीएसपी विधायक एन महेश आज विश्वास मत में अनुपस्थित रहे जो अनुशासनहीनता है जिसे पार्टी ने अति गंभीरता से लिया है और इसलिए श्री महेश को तत्काल प्रभाव से पार्टी से निष्कासित कर दिया गया।
— Mayawati (@Mayawati) July 23, 2019
ಜುಲೈ 16ರ ಬಳಿಕ ನಾನು ಕ್ಷೇತ್ರದಿಂದ ಹೊರ ಹೋಗಿದ್ದೆ, ಈ ಸಂದರ್ಭದಲ್ಲಿ ನನ್ನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಪಕ್ಷದ ಸೂಚನೆಯಂತೆ ತಟಸ್ಥರಾಗಿಯೇ ಇದ್ದರು ಕೂಡ ನನ್ನನ್ನು ಉಚ್ಛಾಟನೆ ಮಾಡಿದ್ದಾರೆ. ಇಲ್ಲಿ ಬಂದ ಮೇಲೆ ನನಗೆ ಅವರು ಟ್ವೀಟ್ ಮಾಡಿರುವ ಮಾಹಿತಿ ಲಭಿಸಿತ್ತು. ನಾನು ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿಲ್ಲ. ಸಂವಹನ ಕೊರತೆ ಈ ಘಟನೆ ನಡೆದಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಕೂಡ ಸರಿ ಹೋಗಲಿದೆ. ನಾನು ಪಕ್ಷದ ಸದಸ್ಯನಾಗಿಯೇ ಮುಂದುವರಿಯುತ್ತೇನೆ ಎಂದರು.
ಆಪರೇಷನ್ ಕಮಲಕ್ಕೆ ಒಳಗಾಗಿದ್ದೇನೆ ಎಂಬುವುದು ನಾನ್ ಸೆನ್ಸ್, ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗದೇ ತಟಸ್ಥನಾಗಿರುವೆ. ನನಗೂ ಖಾಸಗಿ ಜೀವನ ಇರುತ್ತೆ. ಆ ಹಿನ್ನೆಲೆಯಲ್ಲಿ ಮಾಹಿತಿಯ ಕೊರತೆ ಆಗಿದೆ. ಮುಂದಿನ ಸಮಯದಲ್ಲಿ ಪಕ್ಷದ ನಾಯಕರೊಂದಿಗೆ ಮಾತನಾಡುತ್ತೇನೆ. ಎಲ್ಲವೂ ಸರಿಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.