ಬೆಂಗಳೂರು: ಕಾಂಗ್ರೆಸ್- ಜೆಡಿಎಸ್ ನೂತನ ಸಚಿವರ ಪ್ರಮಾಣವಚನ ಸಮಾರಂಭದಲ್ಲಿ ಇಂದು ಹಲವು ವಿಶೇಷಗಳು ಕಂಡುಬಂದವು.
ಜೆಡಿಎಸ್, ಬಿಎಸ್ಪಿ ಹಾಗೂ ಕಾಂಗ್ರೆಸ್ ಮೈತ್ರಿ ಹೊಂದಾಣಿಕೆಯಲ್ಲಿ ಕೊಳ್ಳೆಗಾಲದಿಂದ ಆಯ್ಕೆಯಾದ ಎನ್ ಮಹೇಶ್ ಅವರು ಅಂಬೇಡ್ಕರ್ ಗೆಟಪ್ ನಲ್ಲಿ ಬಂದು ಇಂದಿನ ಸಮಾರಂಭದ ಪ್ರಮುಖ ಹೈಲೆಟ್ ಆಗಿದ್ದಾರೆ.
ಅಂಬೇಡ್ಕರ್ ಗೆಟಪ್ ನಲ್ಲಿ ಬಂದ ಮಹೇಶ್ ಅವರು ಅಂಬೇಡ್ಕರ್ ಮತ್ತ ಬುದ್ಧನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು. ಎಸ್ ಮಹೇಶ್ ಅವರು ಕೊಳ್ಳೆಗಾಲ ಕ್ಷೇತ್ರದ ಬಿಎಸ್ಪಿ ಶಾಸಕರಾಗಿದ್ದು, ಇವರಿಗೆ ಸಚಿವರಾಗುವ ಅವಕಾಶ ಸಿಕ್ಕಿತ್ತು. ಹೀಗಾಗಿ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಪ್ರಮಾಣವಚನಕ್ಕೆ ಆಗಮಿಸಿದ ಶಾಸಕ ಮನಗೂಳಿ ಅವರ ಹೊಸ ಬಟ್ಟೆಯನ್ನು ರಾಜಭವನದೊಳಗೆ ಕೊಂಡೊಯ್ಯಲು ಅವರ ಆಪ್ತ ಸಹಾಯಕ ಪರದಾಡಬೇಕಾಯಿತು.
ಇನ್ನು ಜೆಡಿಎಸ್ ಶಾಸಕ ಸಾ ರಾ ಮಹೇಶ್ ಅವರ ಪತ್ನಿ ಸಮಾರಂಭ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದರು. ಆದ್ರೆ, ಪೊಲೀಸರು ಸಾರಾ ಮಹೇಶ್ ಪತ್ನಿಯನ್ನು ತಡೆದು ಪ್ರಮಾಣ ವಚನ ಮುಗಿದಿದೆ. ಯಾವುದೇ ಕಾರಣಕ್ಕೂ ನಿಮ್ಮನ್ನು ಒಳಗೆ ಕಳುಹಿಸುವುದಿಲ್ಲ ಎಂದು ರಾಜಭವನ ಪ್ರವೇಶಕ್ಕೆ ನಿರಾಕರಿಸಿದ್ದಾರೆ. ಈ ವೇಳೆ ಪೊಲೀಸರ ಜೊತೆ ಜಟಾಪಟಿ ನಡೆಸಿ, ಸಾರಾ ಮಹೇಶ್ ಪತ್ನಿ ರಾಜಭವನದೊಳಗೆ ಹೋಗುವಲ್ಲಿ ಯಶಸ್ವಿಯಾದ್ರು.
ಪ್ರಮಾಣವಚನ ಸಮಾರಂಭಕ್ಕೆ ಕೈ ಮತ್ತು ಜೆಡಿಎಸ್ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಶಾಸಕರು ರಾಜಭವನ ಪ್ರವೇಶಿಸಲು ಹರಸಾಹಸಪಡಬೇಕಾಯಿತು. ಕಾರ್ಯಕ್ರಮದ ಅಧಿಕೃತ ಪಾಸ್ ಇದ್ದರೂ ಜೆಡಿಎಸ್ ಶಾಸಕ ಶರವಣ ರಾಜಭವನಕ್ಕೆ ಹೋಗಲು ಒದ್ದಾಡಿದ್ರು.
ಪ್ರಮಾಣ ವಚನ ಸಮಾರಂಭ ಆರಂಭವಾಗುತ್ತಿದ್ದಂತೆಯೇ ಪೊಲೀಸರು ಪ್ರವೇಶ ಅನುಮತಿ ನಿರಾಕರಿಸಿದ್ದರು. ಈ ವೇಳೆ ಶಾಸಕರ ಬೆಂಬಲಿಗರು ಹಾಗೂ ಕಾರ್ಯಕರ್ತರು ಪೊಲೀಸರ ಜೊತೆ ಮಾತನ ಚಕಮಕಿ ನಡೆಸಿದ್ರು.