ನವದೆಹಲಿ: ಅಂತರಾಷ್ಟ್ರೀಯ ಗಡಿಯಲ್ಲಿ ಪಾಕ್ ಸೇನೆ ಮತ್ತೆ ಉದ್ಧಟತನ ತೋರಿದ್ದು, ಜಮ್ಮು ಸಮೀಪದ ರಾಯಗಡ ವಲಯದ ಬಳಿ ಬಿಎಸ್ಎಫ್ ಯೋಧನ ಕತ್ತು ಸೀಳಿ ಹತ್ಯೆ ಮಾಡಿದೆ.
ಮಂಗಳವಾರ ಈ ಕೃತ್ಯ ನಡೆದಿದ್ದು, ಅಂತರಾಷ್ಟ್ರೀಯ ಗಡಿ ಹಾಗೂ ಭಾರತದ ಗಡಿ ನಿಯಂತ್ರಣ ರೇಖೆ ಉದ್ದಕ್ಕೂ ಭದ್ರತಾ ಪಡೆಯ ತೀವ್ರ ಎಚ್ಚರಿಕೆಯನ್ನು ಘೋಷಿಸಿದೆ. ಈ ಘಟನೆಗೆ ಸಂಬಂಧಪಟ್ಟಂತೆ ಬಿಎಸ್ಎಫ್ ಪಾಕಿಸ್ತಾನದ ರೇರ್ಜಂಸ್ಗೆ ದೂರು ದಾಖಲಿಸಿದೆ.
ಹತ್ಯೆಗೆ ಒಳಗಾದ ಹೆಡ್ಕಾನ್ಸ್ಟೇಬಲ್ ನರೇಂದ್ರ ಕುಮಾರ್ ಅವರ ದೇಹದಲ್ಲಿ ಮೂರು ಬುಲೆಟ್ ಹೊಕ್ಕಿದೆ ಎಂದು ಮೂಲಗಳು ತಿಳಿಸಿವೆ. ಈ ಕೃತ್ಯದ ಹಿಂದೆ ಪಾಕಿಸ್ತಾನ ಪಡೆಯ ಕೈವಾಡವಿದೆ. ಇದಕ್ಕೆ ಸಮಯ ಬಂದಾಗ ಪ್ರತಿಕಾರ ತೀರಿಸಿಕೊಳ್ಳುತ್ತೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಮೃತ ಪಟ್ಟ ದೇಹವನ್ನು ಆರು ಗಂಟೆಗಳ ಬಳಿಕ ಇಂಡೋ-ಪಾಕಿಸ್ತಾನದ ಗಡಿಭಾಗದಿಂದ ವಶಪಡಿಸಿಕೊಳ್ಳಲಾಗಿದೆ. ಇದನ್ನು ಓದಿ: ಉಗ್ರರನ್ನು ಮಟ್ಟ ಹಾಕಲು ಸ್ಮಾರ್ಟ್ ಬೇಲಿ: ಏನಿದು ಸ್ಮಾರ್ಟ್ ಬೇಲಿ? ಹೇಗೆ ಕಾರ್ಯನಿರ್ವಹಿಸುತ್ತೆ?
ಹೇಗೆ ನಡೆದದ್ದು?
ಬೇಲಿಯ ಬಳಿ ಅಡ್ಡಲಾಗಿ ಬೆಳೆದಿದ್ದ ಹುಲ್ಲನ್ನು ಕತ್ತರಿಸುವ ಕಾರ್ಯದಲ್ಲಿ ಬಿಎಸ್ಎಫ್ ತೊಡಗಿತ್ತು. ಈ ವೇಳೆ ಪಾಕಿಸ್ತಾನದ ಪಡೆ ಗುಂಡು ಹಾರಿಸಿದೆ. ಬಿಎಸ್ಎಫ್ ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿದರೂ ಈ ವೇಳೆ ಕಾನ್ಸ್ ಟೇಬಲ್ ಗೆ ಗುಂಡು ತಾಗಿದೆ. ಆದರೆ ಆಳೆತ್ತರ ಬೆಳೆದಿದ್ದ ಹುಲ್ಲಿನಲ್ಲಿ ಪೇದೆಯ ದೇಹ ಸಿಲುಕಿದೆ. ಹೀಗಾಗಿ ಅವರ ಮೃತ ದೇಹವನ್ನು ಪತ್ತೆ ಹಚ್ಚಲು ಬಿಎಸ್ಎಫ್ ಗೆ ಕಷ್ಟವಾಗಿದೆ.
ನಾಪತ್ತೆಯಾಗಿದ್ದ ಪೇದೆಯ ಹುಡುಗಾಟದಲ್ಲಿ ಬಿಎಸ್ಎಫ್ ಸೈನಿಕರು ತೊಡಗಿದಾಗ ಅಲ್ಲೇ ಇದ್ದ ಪಾಕಿಸ್ತಾನಿ ಸೈನಿಕರ ಸಹಾಯ ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಪಾಕಿಸ್ತಾನಿ ಪಡೆಗಳು ಕಾರ್ಯಾಚರಣೆಗೆ ಸ್ವಲ್ಪ ಸಹಾಯ ಮಾಡಿ ಬಳಿಕ ಕೆಸರು ತುಂಬಿದೆ ಎಂದು ಹೇಳಿ ಹಿಂದಕ್ಕೆ ಸರಿದಿದ್ದಾರೆ. ಬಳಿಕ ಬಿಎಸ್ಎಫ್ ಸೂರ್ಯಾಸ್ತಮಾನದ ಬಳಿಕ ದೀರ್ಘ ಕಾರ್ಯಾಚರಣೆ ನಡೆಸಿ ಶವವನ್ನು ಪತ್ತೆ ಹಚ್ಚಿದೆ.
ಮಂಗಳವಾರ ಭಾರತ- ಪಾಕ್ ಗಡಿಯಲ್ಲು ಗೃಹ ಸಚಿವ ರಾಜನಾಥ್ ಸಿಂಗ್ ಸ್ಮಾರ್ಟ್ ಬೆಲಿಯನ್ನು ಉದ್ಘಾಟಿಸಿದ್ದರು. ಈ ದಿನವೇ ಪಾಕ್ ಉದ್ಧಟತನ ಮೆರೆದಿದೆ. ಪಾಕ್ ಸೇನೆ ಈ ರೀತಿ ಮಾಡುವುದೇ ಇದೆ ಮೊದಲಲ್ಲ. ಈ ಹಿಂದೆಯೂ ಪಾಕ್ ಸೇನೆ ಭಾರತದ ಸೈನಿಕರನ್ನು ಹತ್ಯೆ ಮಾಡಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv