ದಾವಣಗೆರೆ: ಕಾಂಗ್ರೆಸ್ (Congress) ನವರ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ತಿರುಕನ ಕನಸು ಕಾಣುತ್ತಿದ್ದಾರೆ. ಅದು ತಿರುಕನ ಕನಸಾಗಿಯೇ ಉಳಿಯುತ್ತದೆಯೇ ಹೊರತು ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ (BS Yediyurappa) ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.
ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ರಂಗ ಮಂದಿರದ ಮೈದಾನದಲ್ಲಿ ನಡೆದ ಜನ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ನನ್ನ ಹುಟ್ಟೂರು ಬೂಕನಕೆರೆಯಲ್ಲಿ ಪೂಜೆ ಇದೆ. ಅದ್ದರಿಂದ ಹೋಗಬೇಕಿದೆ ಅದಕ್ಕಾಗಿ ಬೇಗ ಮಾತನಾಡುತ್ತಿದ್ದೇನೆ. ನನ್ನ ಆತ್ಮೀಯ ರಾಮಚಂದ್ರನ ಮೇಲಿನ ಪ್ರೀತಿಯಿಂದ ಇಲ್ಲಿದೆ ಬಂದಿದ್ದೇನೆ ಅವರು ಕೂಡ ಮನವಿ ಮಾಡಿಕೊಂಡಿದ್ದರು. ರಾಮಚಂದ್ರ 3500 ಕೋಟಿಗೂ ಹೆಚ್ಚು ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಈ ಬಾರಿಯ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡ್ತೇನೆ: ಮುತಾಲಿಕ್
ನನ್ನ ಶಿಕಾರಿಪುರ (Shikaripura) ದಲ್ಲಿ ಕೂಡ ಇಷ್ಟು ದೊಡ್ಡ ಕೆಲಸ ಮಾಡಿಲ್ಲ. ಯಾವ ಶಾಸಕರು ಕೂಡ ಇಷ್ಟು ಅನುದಾನ ತಂದು ಅಭಿವೃದ್ಧಿ ಮಾಡಿಲ್ಲ. ಅದಕ್ಕೆ ಇವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 145ಕ್ಕೂ ಹೆಚ್ಚು ಸೀಟ್ ಗೆದ್ದು ಅಧಿಕಾರ ಹಿಡಿಯುವುದು ಖಚಿತ. ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ನಾವು ಅಧಿಕಾರಕ್ಕೆ ಬರುವುದು. ಆದರೆ ಈ ಕಾಂಗ್ರೆಸ್ ನವರು ತಿರುಕನ ಕನಸನ್ನು ಕಾಣುತ್ತಿದ್ದಾರೆ. ಅವರು ಯಾವಾಗಲೂ ಅಧಿಕಾರಕ್ಕೆ ಬರೋದಿಲ್ಲ ಎಂದು ಹೇಳಿದರು.
ಕೇವಲ ತಿರುಕನ ಕನಸಾಗಿ ಉಳಿಯುತ್ತದೆ. ಕಾಂಗ್ರೆಸ್ ನವರು ಹೆಂಡ, ಹಣದ ಬಲದಿಂದ ಚುನಾವಣೆ ಮಾಡಲು ಹೊರಟಿದ್ದಾರೆ. ಜಾತಿ-ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ. ನಾವು ರಾಜ್ಯದ ಎಲ್ಲಾ ಕಡೆ ಪ್ರವಾಸ ಕೈಗೊಂಡಿದ್ದೇವೆ. ಅಲ್ಲಿನ ವಾತಾವರಣವನ್ನು ಕೂಡ ಗಮನಿಸಿದ್ದೇವೆ. ರಾಜ್ಯದ ಎಲ್ಲಾ ಕಡೆ ಕಾಂಗ್ರೆಸ್ ಅನ್ನು ಜನರು ತಿರಸ್ಕರಿಸುತ್ತಿದ್ದಾರೆ. ಅಲ್ಲದೆ ಜಗಳೂರು ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಎಸ್ ವಿ ರಾಮಚಂದ್ರನನ್ನು ಮತ್ತೆ 50 ಸಾವಿರ ಅಂತರದಲ್ಲಿ ಗೆಲ್ಲಿಸ ಬೇಕು ಎಂದು ಹೇಳುವುದರ ಮೂಲಕ ಮುಂದಿನ ಚುನಾವಣೆಯಲ್ಲಿ ಎಸ್ವಿ ರಾಮಚಂದ್ರಪ್ಪಗೆ ಟಿಕೆಟ್ ಫಿಕ್ಸ್ ಎಂದು ವೇದಿಕೆಯ ಮೇಲೆಯೇ ಬಹಿರಂಗವಾಗಿ ತಿಳಿಸಿದರು.