ತಪ್ಪು ಗ್ರಹಿಕೆಯಿಂದ ಘಟನೆ ನಡೆದಿದ್ದು, ಶಿಕಾರಿಪುರಕ್ಕೆ ಹೋಗಿ ಎಲ್ಲರ ಜೊತೆ ಮಾತಾಡ್ತೀನಿ: ಬಿಎಸ್‍ವೈ

Public TV
2 Min Read
BSY

ಬೆಂಗಳೂರು: ತಪ್ಪು ಗ್ರಹಿಕೆಯಿಂದ ಈ ಘಟನೆ ಆಗಿದೆ. ನಾಳೆ, ನಾಡಿದ್ದು ಹಾಗೇ ಅಲ್ಲಿಗೆ ಹೋಗಿ ಎಲ್ಲರ ಜೊತೆ ಮಾತಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (BS Yediyurappa) ತಿಳಿಸಿದರು.

ಶಿವಮೊಗ್ಗದ (Shivamogga) ಶಿಕಾರಿಪುರದ (Shikaripura)  ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ಕಲ್ಲು ತೂರಾಟ ಪ್ರಕರಣದ ವಿಚಾರಕ್ಕೆ ಸಂಬಂಧಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕಾರಿಪುರದಲ್ಲಿ ಬಂಜಾರ ಸಮುದಾಯದ ಕಾರ್ಯಕರ್ತರು ನಮ್ಮ ಮನೆ ಮೇಲೆ ಕಲ್ಲು ತುರಾಟ ಮಾಡಿದ್ದಾರೆ. ನಾನು ಎಸ್ಪಿ, ಡಿಸಿ ಜೊತೆ ಮಾತಾಡಿದ್ದೇನೆ. ಅನೇಕ ವರ್ಷಗಳಿಂದ ಬಂಜಾರ ಸಮುದಾಯ ನಮ್ಮ ಜೊತೆ ಇದೆ. ತಪ್ಪು ಗ್ರಹಿಕೆಯಿಂದ ಈ ಘಟನೆ ಆಗಿದೆ. ಯಾರ ಮೇಲೂ ಕ್ರಮ ತೆಗೆದುಕೊಳ್ಳಬಾರದು. ಯಾರನ್ನು ಬಂಧನ ಮಾಡಬಾರದು ಎಂದು ಡಿಸಿ, ಎಸ್ಪಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು.

Reservation Protest 3

ಘಟನೆಗೆ ಸಂಬಂಧಿಸಿದಂತೆ ಸಮುದಾಯದ ಮುಖಂಡರನ್ನು ಕರೆದು ಮಾತನಾಡುತ್ತೇನೆ. ಗೊಂದಲಕ್ಕೆ ಕಾರಣ ಏನು ಅಂತ ಸಮಾಲೋಚನೆ ಮಾಡುತ್ತೇನೆ. ಬಂಜಾರ ಸಮುದಾಯದ ಸಮಸ್ಯೆ ಏನೇ ಇದ್ದರೂ, ಚರ್ಚೆಗೆ ಸಿದ್ಧನಾಗಿದ್ದು, ಶಿಕಾರಿಪುರ ಜನ ಶಾಂತಿಗೆ ಹೆಸರಾದವರು. ಯಾವುದೇ ಕಾರಣಕ್ಕೂ ಸಮಾಜ ಘಾತುಕ ಶಕ್ತಿ ಮಾತು ಕೇಳಬೇಡಿ. ಸಮುದಾಯಕ್ಕೆ ಸಿಗಬೇಕಾದ ಎಲ್ಲಾ ಸೌಲಭ್ಯ ಕೊಡುತ್ತೇನೆ ಎಂದು ಭರವಸೆ ನೀಡಿದರು.

Reservation Protest 4

4 ಬಾರಿ ಸಿಎಂ ಆಗಲು ಈ ಸಮುದಾಯದ ಜನರು ಕಾರಣ. ನಾಳೆ, ನಾಡಿದ್ದು ಅಲ್ಲಿಗೆ ಹೋಗಿ ಎಲ್ಲರ ಜೊತೆ ಮಾತನಾಡುತ್ತೇನೆ. ತಾಂಡಾ ಅಭಿವೃದ್ಧಿಗೆ ನಿರಂತರವಾಗಿ ನಾನು ಕೆಲಸ ಮಾಡಿದ್ದೇನೆ. ಬಂಜಾರ ಸಮುದಾಯದ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ಯಾರು ಅಹಿತಕರ ಘಟನೆಗೆ ಅವಕಾಶ ಮಾಡಿಕೊಡಬಾರದು. ಎಲ್ಲರೂ ಶಾಂತಿಯುತವಾಗಿ ಇರಬೇಕು. ಅವರ ಸಮಸ್ಯೆ ತಿಳಿದುಕೊಂಡು ಪರಿಹಾರ ಮಾಡುತ್ತೇನೆ. ಸಮುದಾಯದ ಮುಖಂಡರು ಯಾವಾಗ ಬೇಕಾದ್ರು ಸಿಎಂ ಭೇಟಿ ಮಾಡಬಹುದು. ನಾನು ಬೇಕಾದ್ರೆ ಬಂದು ಮಾತನಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್, ಬಿಜೆಪಿಯವರೇ ಅಭ್ಯರ್ಥಿಗಳ ಪಟ್ಟಿ ರಿಲೀಸ್‌ ಮಾಡೋಕೆ ಒದ್ದಾಡ್ತಿದ್ದಾರೆ, ಇನ್ನೂ ನಮ್ದೆನ್ರೀ; ಹೆಚ್.ಡಿ.ರೇವಣ್ಣ

ಶಿಕಾರಿಪುರ ಶಾಂತಿಯುತವಾಗಿತ್ತು. ಇಂತಹ ಘಟನೆ ಆಗಿರೋದು ನೋವಾಗಿದೆ. ಯಾರ ಮೇಲೂ ಕ್ರಮ ತೆಗೆದುಕೊಳ್ಳದಂತೆ ಎಸ್‍ಪಿ, ಡಿಸಿಗೆ ಮನವಿ ಮಾಡಿದ್ದೇನೆ. ಯಾರದ್ದೋ ಕುಮ್ಮಕ್ಕು ಅಂತ ಈಗ ಹೇಳುವುದಿಲ್ಲ. ಯಾರ ಬಗ್ಗೆ ದೂರುವುದಿಲ್ಲ ಎಂದರು. ಇದನ್ನೂ ಓದಿ: ಬಿಜೆಪಿ ಪಕ್ಷವು ಜನರಿಗೆ ಟೊಳ್ಳು ಭರವಸೆ ನೀಡಿಲ್ಲ- ಡಾ.ಕೆ.ಸುಧಾಕರ್

Share This Article