ಬೆಂಗಳೂರು: ಬಿಜೆಪಿ (BJP) ಅಸಮಾಧಾನಿತರ ಜೊತೆ ಮಾತುಕತೆ ನಡೆಸಲು ನಾನು ಸಿದ್ಧ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಅಸಮಾಧಾನಿತರ ಜೊತೆ ಮಾತುಕತೆಗೆ ಪ್ರಹ್ಲಾದ್ ಜೋಷಿ (Prahlad Joshi) ಪ್ರಯತ್ನ ಮಾಡುತ್ತಿರುವುದನ್ನು ಸ್ವಾಗತ ಮಾಡುತ್ತೇನೆ. ನಾನು ಅಸಮಾಧಾನಿತರ ಜೊತೆ ಮಾತುಕತೆಗೆ ಸಿದ್ಧ. ಇನ್ನು ಮುಂದೆ ಪ್ರತಿನಿತ್ಯ ಬಿಜೆಪಿ ಕಚೇರಿಗೆ ಬೆಳಗ್ಗೆ ಬಂದು ಮಧ್ಯಾಹ್ನ ಹೋಗುತ್ತೇನೆ. ಕಾರ್ಯಕರ್ತರ ಸಮಸ್ಯೆಗಳನ್ನ ಕೇಳುತ್ತೇನೆ. ವಾರದಲ್ಲಿ ಎರಡು ದಿನ ಜಿಲ್ಲಾ ಪ್ರವಾಸವನ್ನೂ ಮಾಡುತ್ತೇನೆ ಎಂದರು.
ಇದೇ ವೇಳೆ ಬಿಜೆಪಿ- ಜೆಡಿಎಸ್ ಮೈತ್ರಿ ಮುಂದುವರಿಕೆ, ಡೆಲ್ಲಿಯಿಂದ ಟಿಕೆಟ್ ತರುತ್ತೇನೆ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಕುಮಾರಸ್ವಾಮಿ ಅವರು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಯಾರೂ ಅಪಾರ್ಥ ಮಾಡಿಕೊಳ್ಳಬಾರದು. ದೇವೇಗೌಡರಿಗೆ ಮೋದಿ ಅವರ ಮೇಲೆ ನಂಬಿಕೆ ಇದೆ. ಬಿಜೆಪಿ- ಜೆಡಿಎಸ್ ಒಟ್ಟಾಗಿ ಹೋಗುತ್ತೇವೆ. ಕಾಂಗ್ರೆಸ್ ಸರ್ಕಾರ ಇಳಿಸಿ ಬಿಜೆಪಿ ಸರ್ಕಾರ ತರುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ನಮ್ಮ ಪಕ್ಷದಲ್ಲಿ ಕೆಲವರಿಗೆ ಅತೃಪ್ತಿ ಇರೋದು ಸತ್ಯ – ಬಿವೈವಿ
ಬಹಳ ತಿಂಗಳ ಬಳಿಕ ಬಿಜೆಪಿ ಕಚೇರಿಗೆ ಯಡಿಯೂರಪ್ಪ ಆಗಮಿಸಿದರು. ದಿಢೀರ್ ಬಿಜೆಪಿ ಕಚೇರಿಗೆ ಭೇಟಿ ಕೊಟ್ಟ ಯಡಿಯೂರಪ್ಪ ನಡೆ ಅಚ್ಚರಿ ತಂದಿತ್ತು. ಇನ್ಮುಂದೆ ಬೆಂಗಳೂರಲ್ಲಿ ಇದ್ದರೆ ಬಿಜೆಪಿ ಕಚೇರಿಗೆ ನಿತ್ಯ ಭೇಟಿಯಾಗಲು ಯಡಿಯೂರಪ್ಪ ನಿರ್ಧರಿಸಿದ್ದಾರೆ.
ನೂರಕ್ಕೆ ನೂರು ಸತ್ಯ:
ಲಂಚದ ಬಗ್ಗೆ ಬಿ.ಆರ್.ಪಾಟೀಲ್ (BR Patil) ಆಡಿಯೋ ವೈರಲ್ ವಿಚಾರವಾಗಿ ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ಬಿ.ಆರ್.ಪಾಟೀಲ್ ಹೇಳಿರೋದು ನೂರಕ್ಕೆ ನೂರು ಸತ್ಯ. ಏನೇ ಆಗಬೇಕಾದ್ರೆ ಹಣ ಕೊಟ್ಟು ಪಡೆಯುವ ಸ್ಥಿತಿ ನಿರ್ಮಾಣ ಆಗಿದೆ ಎಂದು ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: ಸರ್ಕಾರದ ಬುಡಕ್ಕೆ ಮತ್ತೊಂದು ಭ್ರಷ್ಟಾಚಾರ ಬಾಂಬ್; ಜಮೀರ್ ಪಿಎ – ಬಿ.ಆರ್ ಪಾಟೀಲ್ರದ್ದು ಎನ್ನಲಾದ ಆಡಿಯೋ ವೈರಲ್
ಬಡವರು ಹಣ ಕೊಟ್ಟು ಮನೆ ತೆಗೆದುಕೊಳ್ಳುವ ದುಸ್ಥಿತಿ ನಿರ್ಮಾಣ ಆಗಿದೆ. ಇದನ್ನು ನಾನು ಹೇಳುತ್ತಿಲ್ಲ. ಬಿ.ಆರ್.ಪಾಟೀಲ್ ಅವರೇ ಹೇಳಿದ್ದಾರೆ. ಸರ್ಕಾರ ಈಗಲಾದರೂ ತಪ್ಪನ್ನು ಒಪ್ಪಿಕೊಂಡು ಸರಿಪಡಿಸಿಕೊಳ್ಳಲಿ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.