ಬೆಂಗಳೂರು: ಮೈತ್ರಿ ಸರ್ಕಾರ ಬಳಿಕ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಿಎಸ್ ಯಡಿಯೂರಪ್ಪ ಅವರು ಮೊದಲ ಬಾರಿಗೆ ಹೊರರಾಜ್ಯದ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಹೈದರಾಬಾದ್ ಬಳಿಯ ಭದ್ರಾಚಲಂನಲ್ಲಿರುವ ಸೀತಾರಾಮಚಂದ್ರನ ದೇವಸ್ಥಾನಕ್ಕೆ ಬಿಎಸ್ವೈ ಭೇಟಿ ನೀಡುತ್ತಿದ್ದಾರೆ.
ಈ ದೇವಾಲಯಕ್ಕೆ ಹೆಚ್ಚು ರಾಜಕೀಯ ನಾಯಕರು ಭೇಟಿ ನೀಡುತ್ತಾರೆ. ತೆಲಂಗಾಣ ಸಿಎಂ ಕೆಸಿಆರ್ ಅವರು ಕೂಡ ಮುಖ್ಯಮಂತ್ರಿ ಆಗುವ ಮೊದಲು, ಆದ ನಂತರ ಇದೇ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಬಿಎಸ್ ಯಡಿಯೂರಪ್ಪ ಅವರು ಕೂಡ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಆ ಬಳಿಕ ದೇವಾಲಯದ ಚಿನಜಿಯರ್ ಸ್ವಾಮೀಜಿ ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.
ಇಂದು ಸಂಜೆ ವೇಳೆಗೆ ಪೊಲೀಸರೊಂದಿಗೆ ಸಭೆ ಪೂರ್ಣಗೊಳಿಸಿದ ಬಿಎಸ್ವೈ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳಿದ್ದು, ಅಲ್ಲಿಂದ ನೇರ ಹೈದರಾಬಾದ್ಗೆ ತೆರಳಿದ್ದಾರೆ. ದೇವಾಲಯಕ್ಕೆ ಭೇಟಿ ನೀಡಿ ನಾಳೆ ಬೆಳಿಗ್ಗೆ 10 ಗಂಟೆಗೆ ಮರಳಲಿದ್ದಾರೆ. ಸರ್ಕಾರಕ್ಕೆ ಯಾವುದೇ ವಿಘ್ನಗಳು ಎದುರಾಗದಂತೆ ಪೂಜೆ ಸಲ್ಲಿಸಲು ಬಿಎಸ್ವೈ ಭೇಟಿ ನೀಡುತ್ತಿದ್ದಾರೆ.
ಭದ್ರಾಚಲಂ ಶ್ರೀರಾಮನ ದರ್ಶನವನ್ನು ಮಾಡುವುದರಿಂದ ಎದುರಾಗ ಬಹುದಾದ ವಿಘ್ನಗಳು ದೂರ ಆಗಲಿದೆ ಎಂಬ ನಂಬಿಕೆ ಭಕ್ತರಲ್ಲಿ ಇದೆ. ತೆಲಂಗಾಣ ಸಿಎಂ ಕೆಸಿಆರ್ ಅವರು ಕೂಡ ಇದೇ ನಂಬಿಕೆ ಮೇಲೆ ಮತ್ತೆ ಅಧಿಕಾರ ಪಡೆದಿದ್ದರು ಎಂಬ ಮಾತು ತೆಲಂಗಾಣದಲ್ಲಿ ಪ್ರಚಲಿತದಲ್ಲಿದೆ.