ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರದಲ್ಲಿ ಇರುವಾಗಲೇ ಉತ್ತರಾಧಿಕಾರಿ ಆಯ್ಕೆ ಮಾಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ.
ನಮಗೆ ಬಿ.ಎಸ್.ಯಡಿಯೂರಪ್ಪ ಸರ್ಕಾರಕ್ಕಿಂತ ನಾಯಕತ್ವವೇ ಮುಖ್ಯ. ಯಡಿಯೂರಪ್ಪನವರ ನಂತರ ಬಿಜೆಪಿ ನಡೆಸುವ ಜನ ಗಟ್ಟಿ ಇರಬೇಕು ಅಂತ ಹೈಕಮಾಂಡ್ ಹೊಸ ವರಸೆ ಆರಂಭಿಸಿದೆ. ಹೀಗಾಗಿ ಮೂವರು ನಾಯಕರಿಗೆ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಬಿ.ಎಸ್.ಯಡಿಯೂರಪ್ಪ ಅವರು ಹೆಚ್ಚು ಅಂದರೆ ಈ ಅವಧಿಯ ಸರ್ಕಾರಕ್ಕೆ ಮಾತ್ರ ಸೀಮಿತ ಎನ್ನುವ ಲೆಕ್ಕಚಾರಕ್ಕೆ ಬಿಜೆಪಿ ಹೈಕಮಾಂಡ್ ಬಂದಂಗಿದೆ. ಬಿಎಸ್ವೈ ಸದ್ಯ ಬಿಜೆಪಿಯ ಮಾಸ್ ಲೀಡರ್. ಅವರ ನಂತರ ಬಿಜೆಪಿಗೆ ಮಾಸ್ ಲೀಡರ್ ಕೊರತೆ ಎದುರಾಗುವ ಸಾಧ್ಯತೆ ಇದೆ. ಈ ಕೊರತೆ ನಿವಾರಿಸಲು ಗಟ್ಟಿ ನಾಯಕತ್ವ ಅನಿವಾರ್ಯ ಎಂಬುದನ್ನು ಮನಗಂಡಿರುವ ಹೈಕಮಾಂಡ್, ಬಿಎಸ್ವೈ ನಂತರದ ನಾಯಕತ್ವ ಸೃಷ್ಟಿಗೆ ಕೈ ಹಾಕಿದೆ.
ವಿಶೇಷವೆಂದರೆ ಬಿಎಸ್ವೈ ಅವರ ಆಪ್ತರೇ ಉತ್ತರಾಧಿಕಾರಿ ಪ್ರಯೋಗ ಶಾಲೆಯಲ್ಲಿ ಪ್ರಯೋಗಕ್ಕೆ ಒಳಗಾಗುತ್ತಿದ್ದಾರೆ. ಸಿಎಂ ಬಿಎಸ್ವೈ ಜೊತೆ ಚರ್ಚಿಸಿಯೇ ಹೈಕಮಾಂಡ್ ಈ ಪ್ರಯೋಗಕ್ಕೆ ಮುಂದಾಗಿದೆ. ಹೀಗಾಗಿ ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ್ ಹಾಗೂ ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿ ಮಾಡಲು ನಿರ್ಧರಿಸಲಾಗಿದೆ. ಈ ವಿನೂತನ ತಂತ್ರಗಾರಿಕೆಯ ಪ್ರಯೋಗ ಶಾಲೆಯಲ್ಲಿ ಯಾರು ಪಾಸ್ ಆಗುತ್ತಾರೋ ಅವರೇ ರಾಜ್ಯ ಬಿಜೆಪಿಯ ಮುಂದಿನ ಲೀಡರ್ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಈ ನಡುವೆ ಹೈಕಮಾಂಡ್ ಪ್ರಯೋಗದಿಂದ ಇಬ್ಬರು ನಾಯಕರಿಗೆ ಖುಷಿಯಾಗಿದೆ. ಬಿಎಸ್ವೈ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಅವರಿಗೆ ನಾಯಕತ್ವ ತಪ್ಪುತ್ತೆ ಎನ್ನುವುದು ಕೆಲವರಿಗೆ ಖುಷಿಗೆ ಕಾರಣವಾಗಿದೆಯಂತೆ. ಆರ್.ಅಶೋಕ್ ಅವರಿಗೆ ನಾಯಕತ್ವ ತಪ್ಪುತ್ತೆ ಎನ್ನುವ ಸಂತಸದಲ್ಲಿ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಇದ್ದಾರೆ ಎನ್ನಲಾಗಿದೆ.