ಮೈಸೂರು: ವರುಣಾ ಕ್ಷೇತ್ರದಿಂದ ಬಿಜೆಪಿಯ ಸಂಭಾವ್ಯ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ತಾಲೂಕಿನ ವರುಣಾ ಗ್ರಾಮದಲ್ಲಿ ವಾಸಕ್ಕಾಗಿ ಪಡೆದಿರುವ ಮನೆಯ ಗೃಹಪ್ರವೇಶ ಇಂದು ನೆರವೇರಿತು.
ಕುಟುಂಬ ಸಮೇತರಾಗಿ ವಿಜಯೇಂದ್ರ ಹೋಮ ಹವನ ನಡೆಸಿ ಗೃಹಪ್ರವೇಶ ಮಾಡಿದರು. ಹೋಮಕುಂಡ ಪೂಜೆಯಲ್ಲಿ ವಿಜಯೇಂದ್ರ ಮತ್ತು ಅವರ ಪತ್ನಿ ಪ್ರೇಮ ಭಾಗಿಯಾಗಿದ್ದರು. ಗಣಹೋಮ, ವಿಜಯೀ ಹೋಮಗಳನ್ನ ನೆರವೇರಿಸಿ, ಕುಲದೇವ ಯಡಿಯೂರು ಸಿದ್ದಲಿಂಗಶ್ವೇರ, ಉಮಾಮಹೇಶ್ವರಿ, ಕ್ಷೇತ್ರದ ಅಧಿದೇವ ಬಸವೇಶ್ವರರಿಗೂ ಪೂಜೆ ಸಲ್ಲಿಸಿದರು. ತಾಯಿ ಮೈತ್ರಿದೇವಿ ಭಾವಚಿತ್ರವಿಟ್ಟು ಮಾತೃಪೂಜೆ ನೆರವೇರಿಸಿದರು.
ಗೃಹಪ್ರವೇಶದಲ್ಲಿ ಬಿಜೆಪಿ ಮುಖಂಡರು, ನೂರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಬಿವೈ ವಿಜಯೇಂದ್ರ ಅವರು, ಇದು ನನ್ನ ಮನೆಯಲ್ಲ ಬಿಜೆಪಿ ಕಾರ್ಯಕರ್ತರ ಮನೆ. ಚುನಾವಣೆವರೆಗೂ ಇಲ್ಲಿಗೆ ಬರುತ್ತೇನೆ. ಚುನಾವಣೆ ಮುಗಿದ ಮೇಲೂ ಇಲ್ಲೆ ಇರುತ್ತೇನೆ ಎಂದರು.
ತಮ್ಮ ಮನೆಯ ಬಾಗಿಲು ಸದಾ ಕಾಲ ಜನರ ಸೇವೆಗೆ ಸದಾ ಬಾಗಿಲು ತೆರೆದಿರುತ್ತೆ. ಯಾರು ಬೇಕಾದರು ಬರಬಹುದು ಹೋಗಬಹುದು. ದೈವಕೃಪೆ ಬೇಕು ಎನ್ನುವ ಕಾರಣಕ್ಕೆ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದ್ದೇನೆ. ವಲಸಿಗ ಅನ್ನುವ ಆರೋಪ ಕಳೆದು ಕೊಳ್ಳಲು ಅಥವಾ ಇತರರ ತೃಪ್ತಿಗೆ ನಾನು ಇಲ್ಲಿ ಮನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಮುಂದೆ ವರುಣಾ ಕ್ಷೇತ್ರದ ಪಕ್ಷದ ಕಚೇರಿಯೂ ಇದೆ ಆಗಲಿದೆ. ಸಿದ್ದರಾಮಯ್ಯನವರು ಇಲ್ಲಿನ ವಾತವರಣ ನೋಡಿಯೇ ಬದಾಮಿಗೆ ಹೋಗಿದ್ದಾರೆ ಎಂದು ಹೇಳಿದರು.