ಮಂಡ್ಯ: ಮಂಗಳವಾರ ದೋಸ್ತಿ ಸರ್ಕಾರದಲ್ಲಿ ಏರುಪೇರಾಗುತ್ತದೆ ಎಂದು ಸೋಮವಾರ ಹೇಳಿಕೆ ನೀಡಿದ್ದ ಯಡಿಯೂರಪ್ಪ ಅವರು ಇಂದು ನಾನು ಅಂತಹ ಹೇಳಿಕೆ ನೀಡಿಲ್ಲ ಎಂದು ಹೇಳುವ ಮೂಲಕ ಯೂ ಟರ್ನ್ ಮಾಡಿದ್ದಾರೆ.
ಮಂಡ್ಯ ಕ್ಷೇತ್ರದ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಬಿಎಸ್ವೈ, ಜಮಖಂಡಿ ಕ್ಷೇತ್ರದ ಸಭೆಯಲ್ಲಿ ಭಾಗವಹಿಸಲು ತೆರಳಬೇಕಾದ ಕಾರಣ ಕಾರ್ಯಕ್ರಮದಿಂದ ಬೇಗ ನಿರ್ಗಮಿಸುತ್ತಿದ್ದೇನೆ. ಆದರೆ ಇಂದು ಸಭೆಗೆ ಆಗಮಿಸಿರುವ ಪ್ರತಿಯೊಬ್ಬ ಕಾರ್ಯಕರ್ತರು ನಿಮ್ಮ ವಾರ್ಡ್ ಮಟ್ಟದಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ಪಕ್ಷದ ಕಾರ್ಯಗಳನ್ನು ಪ್ರಚಾರ ಮಾಡಿ ಎಂದು ಮನವಿ ಮಾಡಿದರು.
ಈ ವೇಳೆ ಕಾರ್ಯಕ್ರಮದಿಂದ ಮರಳುತ್ತಿದ್ದ ಬಿಎಸ್ವೈ ಅವರನ್ನು ದೋಸ್ತಿ ಸರ್ಕಾರದ ಸ್ಫೋಟದ ಹೇಳಿಕೆ ಕುರಿತು ಮಾಧ್ಯಮಗಳು ಪ್ರಶ್ನೆ ಮಾಡಿದ ವೇಳೆ ಅಂತಹ ಹೇಳಿಕೆಯನ್ನು ನಾನು ನೀಡಿಯೇ ಇಲ್ಲ ಎಂದು ಉತ್ತರಿಸಿ ಮುಂದೆ ಹೋಗಿದ್ದಾರೆ.
ಶಿವಮೊಗ್ಗ ಪ್ರಚಾರ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಬಿಎಸ್ವೈ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಮನೆಗಳು ಬಿಜೆಪಿಯ ಮನೆಗಳಾಗುತ್ತವೆ. ಮಂಗಳವಾರ ನಾಮಪತ್ರ ಸಲ್ಲಿಕೆ ಮುಗಿದ ಮೇಲೆ ರಾಜಕೀಯ ಏರುಪೇರು ಆಗಲಿದೆ. ಅಲ್ಲದೇ ಕಾಂಗ್ರೆಸ್ ಜೆಡಿಎಸ್ ಒಬ್ಬರ ಮುಖ ಇನ್ನೊಬ್ಬರು ನೋಡದ ಪರಿಸ್ಥಿತಿ ನಿರ್ಮಾಣ ಆಗಲಿದೆ. ನಾನು ಈಗಲೇ ಭವಿಷ್ಯ ಹೇಳುವುದಿಲ್ಲ. ಕಾದು ನೋಡಿ ಮುಂದೆ ಏನಾಗುತ್ತೆ ಎಂದು ತಿಳಿಸಿದ್ದರು.
ಇದೇ ಮೊದಲಲ್ಲ: ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮಾರ್ಚ್ 16 ರಂದು ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ, ಎಚ್ಡಿಡಿ ಕುಟುಂಬದ ಹಗರಣ ಬಯಲು ಮಾಡುವುದಾಗಿ ಬಿಎಸ್ವೈ ಸ್ಫೋಟಕ ಹೇಳಿಕೆ ನೀಡಿ ಸಂಜೆ 4 ಗಂಟೆಗೆ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದರು. ಆದರೆ ಅಂದು ತುರ್ತು ಸುದ್ದಿಗೋಷ್ಠಿ ನಡೆಸಿ ಹಳೆ ಪ್ರಕರಣವೊಂದರ ದಾಖಲೆ ನೀಡಿದ್ದರು. ಇದಕ್ಕೂ ಮುನ್ನ ತಮ್ಮ ಟ್ವಿಟ್ಟರ್ ನಲ್ಲಿ ರಾಜ್ಯ ರಾಜಕೀಯದ ಕುರಿತು ವಿಶೇಷ ಮಾಹಿತಿ ಬಹಿರಂಗ ಮಾಡುವುದಾಗಿ ವಿಡಿಯೋ ಟ್ವೀಟ್ ಮಾಡಿ ಪ್ರಚಾರ ಪಡೆದಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv