ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿರುದ್ಧದ ಆಪರೇಷನ್ ಆಡಿಯೋ ಪ್ರಕರಣ ಸಂಬಂಧಿಸಿದಂತೆ ಎಸ್ಐಟಿ ತನಿಖೆಗೆ ಮುಂದಾದ ಸರ್ಕಾರಕ್ಕೆ ಹಿನ್ನಡೆಯಾಗಿದ್ದು, ತನಿಖೆಗೆ ಯಾವುದೇ ಅಧಿಕಾರಿ ಒಪ್ಪುತ್ತಿಲ್ಲ.
ಎಸ್ಐಟಿ ತನಿಖೆ ಪ್ರತಿಪಕ್ಷಗಳಿಗೂ ಬೇಡ. ಅಧಿಕಾರಿಗಳಿಗೂ ಬೇಡ. ಪ್ರಮಾಣಿಕ ಅಧಿಕಾರಿಯನ್ನು ನೇಮಿಸ್ತೇನೆ ಎಂದು ಸಿಎಂ ಹೇಳಿದ್ದರು. ಆದ್ರೆ ಬಿಎಸ್ವೈ ವಿರುದ್ಧ ತನಿಖೆಗೆ ಯಾವುದೇ ಅಧಿಕಾರಿ ಒಪ್ಪುತ್ತಿಲ್ಲ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಎಡಿಜಿಪಿ ಪ್ರತಾಪ್ ರೆಡ್ಡಿ ಅವರು ವಿದೇಶ ಪ್ರಯಾಣದ ನೆಪವೊಡ್ಡಿ ತನಿಖೆಯಿಂದ ಹಿಂದೆ ಸರಿದಿದ್ದಾರೆ. ಶಿವಮೊಗ್ಗದಲ್ಲಿದ್ದ ಕಮಲ್ ಪಂಥ್ ಅವರು ಬಿಎಸ್ವೈಗೆ ಆಪ್ತರಾಗಿದ್ದಾರೆ. ಹೀಗಾಗಿ ಅವರು ತನಿಖೆ ನಡೆಸಲು ಒಪ್ಪಿಗೆ ಸೂಚಿಸುತ್ತಿಲ್ಲ. ಇತ್ತ ಸುಬ್ರಹ್ಮಣ್ಯೇಶ್ವರರಾವ್ ನಿಯೋಜಿಸಲು ದೋಸ್ತಿ ಸರ್ಕಾರಕ್ಕೆ ಒಲವಿಲ್ಲ. ಇನ್ನು ಐಜಿಪಿ ಕೇಡರ್ನ ಅಲೋಕ್ ಕುಮಾರ್ ನೇಮಕಕ್ಕೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಆಪರೇಷನ್ ಆಡಿಯೋ ಪ್ರಕರಣ ಸಂಬಂಧಿಸಿದಂತೆ ಶರಣಗೌಡ ನೀಡಿದ ದೂರಿನ ಮೇರೆಗೆ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ನಾಲ್ವರು ಬಿಜೆಪಿ ನಾಯಕರ ವಿರುದ್ಧ ಎಫ್ಐಆರ್ ದಾಖಲಾಗಿದೆ. ದೇವದುರ್ಗ ಶಾಸಕ ಶಿವನಗೌಡ ನಾಯಕ್, ಶಾಸಕ ಪ್ರೀತಂಗೌಡ, ಪತ್ರಕರ್ತ ಮರಮಕಲ್ ಕೂಡಾ ಸೇರಿದ್ದಾರೆ. ಒಟ್ಟಿನಲ್ಲಿ ಪ್ರಕರಣದ ತನಿಖೆ ಕುರಿತು ಎಸ್ಐಟಿ ರಚನೆ ಸಂಬಂಧ ಇಂದು ಸಂಜೆ ವೇಳೆ ಆದೇಶ ಹೊರಬೀಳುವ ಸಾಧ್ಯತೆ ಇದ್ದು, ಇದನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಲು ತಯಾರಿ ನಡೆಸಿರುವುದಾಗಿ ಬಿಜೆಪಿ ಮೂಲಗಳು ತಿಳಿಸಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv