ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಮ್ಮ ನಿಯೋಗದ ಜೊತೆಗೆ ಇಂದು ಬೆಳಗ್ಗೆ 10.25ಕ್ಕೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವೋಸ್ ಗೆ ಪ್ರಯಾಣ ಬೆಳೆಸಲಿದ್ದಾರೆ.
ಸ್ವಿಟ್ಜರ್ಲೆಂಡ್ನ ದಾವೋಸ್ ನಲ್ಲಿ ಇದೇ 20ರಿಂದ 23 ರವರೆಗೆ ನಡೆಯಲಿರುವ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಬಿಎಸ್ವೈ ನೇತೃತ್ವದ ನಿಯೋಗ ಭಾಗವಹಿಸುತ್ತಿದೆ. ಸಿಎಂ ನೇತೃತ್ವದ ನಿಯೋಗದಲ್ಲಿ ಸಿಎಂ ಸೇರಿ ಒಟ್ಟು 10 ಜನ ಇರಲಿದ್ದಾರೆ.
ನಾನ್ ಅಫಿಶಿಯಲ್ ಗ್ರೂಪ್ ನಲ್ಲಿ ಮೂವರು ಪ್ರಯಾಣ ಬೆಳೆಸಲಿದ್ದಾರೆ. ಸಿಎಂ ಯಡಿಯೂರಪ್ಪ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮತ್ತು ಸಿಎಂ ರಾಜಕೀಯ ಸಲಹೆಗಾರ ಮರಂಕಲ್ ವಿದೇಶದತ್ತ ಪ್ರಯಾಣಿಸಲಿದ್ದಾರೆ. ಆಫಿಶಿಯಲ್ ಗ್ರೂಪ್ ನಲ್ಲಿ ಮೂವರು ಐಎಎಸ್ ಅಧಿಕಾರಿಗಳು ಸೇರಿ 7 ಅಧಿಕಾರಿಗಳು ದಾವೋಸ್ ಗೆ ಹೊರಟಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯ ಭಾಸ್ಕರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಸಿಎಂ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತ ಗುಂಜನ್ ಕೃಷ್ಣ, ಸಿಎಂ ವಿಶೇಷ ಕರ್ತವ್ಯಾಧಿಕಾರಿ ಕೆ.ಪಿ ರುದ್ರಪ್ಪಯ್ಯ ಮತ್ತು ಪಿಎಸ್ ದವಳೇಶ್ವರ್ ದಾವೋಸ್ ಗೆ ಹೊರಟಿದ್ದಾರೆ.
ದಾವೋಸ್ ಶೃಂಗ ಸಭೆಯಲ್ಲಿ ಈವರೆಗೆ 35 ಜಾಗತಿಕ ಮಟ್ಟದ ಉದ್ಯಮಿಗಳ ಜೊತೆ ಸಿಎಂ ನೇತೃತ್ವದ ನಿಯೋಗ ಸಂವಾದ ನಡೆಸಲಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆ ಸ್ನೇಹಿ ವಾತಾವರಣ, ಸೌಲಭ್ಯಗಳ ಕುರಿತು ಹೂಡಿಕೆದಾರರಿಗೆ ರಾಜ್ಯದ ನಿಯೋಗ ಮನವರಿಕೆ ಮಾಡಿಕೊಡಲಿದೆ. ಜೊತೆಗೆ ರಾಜ್ಯದಲ್ಲಿ ಬಂಡವಾಳ ಹೂಡಲು ವಿದೇಶೀ ಹೂಡಿಕೆದಾರರನ್ನು ಸಿಎಂ ಆಹ್ವಾನಿಸಲಿದ್ದಾರೆ. ಜನವರಿ 24 ರ ರಾತ್ರಿ ಸಿಎಂ ಮತ್ತು ನಿಯೋಗ ಬೆಂಗಳೂರಿಗೆ ವಾಪಸ್ಸಾಗಲಿದೆ.