ಧಾರವಾಡ: ಸಮ್ಮಿಶ್ರ ಸರ್ಕಾರದಿಂದ ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆದಿದೆ, ಭಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕಿಡಿಕಾರಿದ್ದಾರೆ.
ಜಿಲ್ಲೆಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಎಂ ತಾವು ಹೇಳಿದಂತೆ ನಡೆದುಕೊಂಡಿಲ್ಲ. ಪ್ರತಿಯೊಂದು ವಿಷಯದಲ್ಲೂ ಗೊಂದಲ ಉಂಟುಮಾಡಿಕೊಳ್ತಾರೆ. ರಾಜ್ಯದಲ್ಲಿ ಬಹುತೇಕ ತಾಲೂಕಿನಲ್ಲಿ ಜನ ಬರಗಾಲದಿಂದ ತತ್ತರಿಸಿ ಸಂಕಷ್ಟದಲ್ಲಿದ್ದಾರೆ. ಈ ವೇಳೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ. ಇದರಿಂದ ಸಾರ್ವಜನಿಕರ ಮೇಲೆ ಭಾರ ಬೀಳೋದಿಲ್ವ? ಈ ರೀತಿ ತೆರಿಗೆ ಹೆಚ್ಚಳ ಮಾಡಿ ಎಲ್ಲದಕ್ಕೂ ಸಾಲಮನ್ನಾ ಅಂತ ಕುಂಟು ನೆಪ ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಸಚಿವರೊಬ್ಬರ ಇಲಾಖೆಯಲ್ಲೇ ಸುಮರು 76 ಲಕ್ಷ ರೂ. ಸಿಕ್ಕಿದೆ, ಇದು ಎಷ್ಟರ ಮಟ್ಟಿಗೆ ಸರಿ. ಈ ವಿಚಾರವಾಗಿ ತಕ್ಷಣ ಕ್ರಮ ತೆಗೆದುಕೊಳ್ಳೋದನ್ನ ಬಿಟ್ಟು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಬೇರೆ ಉತ್ತರ ನೀಡುತ್ತಾರೆ. ಸರ್ಕಾರದಲ್ಲಿ ಭಷ್ಟಾಚಾರ ತುಂಬಿ ತುಳುಕುತ್ತಿದೆ, ಅಭಿವೃದ್ಧಿ ಕಾರ್ಯ ಸ್ಥಗಿತವಾಗ್ತಿದೆ. ರಾಜ್ಯದಲ್ಲಿ ಒಂದು ರೀತಿ ತುಘಲಕ್ ದರ್ಬಾರ್ ನಡೆದಿದ್ದು, ಇದನ್ನ ನಾನು ಖಂಡಿಸುತ್ತೇನೆ. ಬರಗಾಲದಿಂದ ಜನ ಉದ್ಯೋಗವಿಲ್ಲದೆ ವಲಸೆ ಹೋಗ್ತಿದ್ದಾರೆ. ಈ ಬಗ್ಗೆ ಅನುದಾನ ಬಿಡುಗಡೆ ಮಾಡುವ ಯಾವುದೇ ಕೆಲಸವನ್ನು ಸರ್ಕಾರ ಮಾಡ್ತಿಲ್ಲ ಎಂದು ಬಿಎಸ್ವೈ ಹರಿಹಾಯ್ದಿದ್ದಾರೆ.
ಧಾರವಾಡದಲ್ಲಿ ಸಮ್ಮೇಳನ ಅದ್ಧೂರಿಯಾಗಿ ನಡೆಯುತ್ತಿದೆ. ಸನ್ಮಾನ ಕಾರ್ಯಕ್ರಮ ಇದೆ, ನನನ್ನು ಆಹ್ವಾನಿಸಿದ್ದಾರೆ ಅದಕ್ಕೆ ಬಂದಿದ್ದೇನೆ. ಮಾಧ್ಯಮದವರು ಕಳೆದ ಮೂರು ದಿನಗಳಿಂದ ಈ ಕಾರ್ಯಕ್ರಮಕ್ಕೆ ಸಹಕಾರ ಕೊಡುತ್ತಿರೋದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸ್ಯಾಂಡಲ್ವುಡ್ ಸ್ಟಾರ್ ನಟರ ಮೇಲೆ ಐಟಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ತೆರಿಗೆ ಅಧಿಕಾರಿಗಳಿಗೆ ಯಾವುದು ಸೂಕ್ತ ಅನಿಸುತ್ತದೆಯೋ ಅದನ್ನ ಮಾಡ್ತಾರೆ. ಈ ಬಗ್ಗೆ ಕೇಂದ್ರವನ್ನು ಮಧ್ಯ ತರೋದು ಸರಿಯಲ್ಲ. ಈ ವಿಚಾರವಾಗಿ ತನಿಖೆ ಆಗುತ್ತಿದೆ. ಇದಕ್ಕೆ ಯಾವ ನಟರು ವಿರೋಧ ಮಾಡ್ತಿಲ್ಲ, ಅಧಿಕಾರಿಗಳಿಗೆ ಸಹಕರಿಸುತ್ತಿದ್ದಾರೆ. ಇದರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv