ಚಿಕ್ಕೋಡಿ: ಅಡ್ಡಾದಿಡ್ಡಿಯಾಗಿ ಲಾರಿ ಓಡಿಸಿಕೊಂಡು ಹೊರಟಿದ್ದ ಚಾಲಕನನ್ನು (Driver) ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ (Hukkeri) ತಾಲೂಕಿನ ಬೆನಕೋಳಿ ಗ್ರಾಮದ ಬಳಿ ನಡೆದಿದೆ.
ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದ ಅಜೀಮ್ ಇಪ್ಪೇರಿ (23) ಮೃತ ಲಾರಿ ಚಾಲಕ. ಸಂಕೇಶ್ವರದಿಂದ ಬೆಳಗಾವಿ ಕಡೆಗೆ ಲಾರಿ ಚಲಾಯಿಸಿಕೊಂಡು ಬರುತ್ತಿದ್ದ ಅಜೀಮ್ ಚಾಲನೆ ವೇಳೆ ಬೈಕ್, ಕ್ಯಾಂಟರ್ಗೆ ಗುದ್ದಿ ಗಾಬರಿಯಿಂದ ಹೊರಟಿದ್ದ. ಈ ವೇಳೆ ಪರಸಪ್ಪಗೆ ಸೇರಿದ ಬೈಕ್, ಹಣಮಂತ ಇಡ್ಲಿಗೆ ಸೇರಿದ ಕ್ಯಾಂಟರ್ಗೆ ಗುದ್ದಿದ್ದ.
ಎರಡು ಕಡೆ ಅಪಘಾತ ಎಸಗಿದರೂ ಲಾರಿ ನಿಲ್ಲಿಸದೇ ಪರಾರಿಯಾಗಲು ಅಜೀಂ ಯತ್ನಿಸಿದ್ದ. ಈ ವೇಳೆ ಬೆನ್ನತ್ತಿ ಕಾಟಬಳಿ ಗ್ರಾಮದ ಹತ್ತಿರ ಲಾರಿಗೆ ಕಲ್ಲೆಸೆದು ಪರಸಪ್ಪ ಹಾಗೂ ಹಣಮಂತ ತಡೆದಿದ್ದರು.
ಈ ವೇಳೆ ಪರಸಪ್ಪ ತನ್ನ ಐವರು ಸ್ನೇಹಿತರ ಜೊತೆಗೂಡಿ ಅಜೀಂ ಜೊತೆಗೆ ವಾಗ್ವಾದ ನಡೆಸಿದ್ದ. ಇದು ವಿಕೋಪಕ್ಕೆ ತಿರುಗಿ ಅಜೀಂ ಮರ್ಮಾಂಗಕ್ಕೆ ಒದ್ದು, ಐವರು ಬಡಿಗೆಯಿಂದ ಮಾರಣಾಂತಿಕ ಹಲ್ಲೆ ಎಸಗಿದ್ದರು. ಇದನ್ನೂ ಓದಿ: ಮಸ್ಕ್ ಜೊತೆ ಒಪ್ಪಂದ – ಫಸ್ಟ್ ಟೈಂ ಸ್ಪೇಸ್ ಎಕ್ಸ್ ರಾಕೆಟ್ನಲ್ಲಿ ಹಾರಲಿದೆ ಇಸ್ರೋ ಉಪಗ್ರಹ
ಪರಸಪ್ಪ, ಹಣಮಂತಗೆ ಹಾಳಪ್ಪ ಹಳ್ಯಾಗೋಳ, ಈರಪ್ಪ ನಾಯಿಕ್, ಅಮಿತ್ ಶಿಂಧೆ ಸಾಥ್ ನೀಡಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಅಜೀಂಗೆ ಬೆಳಗಾವಿಯ ಬೀಮ್ಸ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲಾರಿ ಚಾಲಕ ಅಜೀಂ ಇಪ್ಪೇರಿ ಮೃತಪಟ್ಟಿದ್ದಾನೆ.
ಲಾರಿ ಚಾಲಕನ ಹತ್ಯೆಗೆ ಕಾರಣರಾದ ಐವರೂ ಆರೋಪಿಗಳನ್ನ ಯಮಕನಮರಡಿ ಪೊಲೀಸರು ಬಂಧಿಸಿ ಬೆಳಗಾವಿ ಹಿಂಡಲಗಾ ಜೈಲಿಗೆ (Hindalga Jail) ರವಾನೆ ಮಾಡಿದ್ದಾರೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.