ಧಾರವಾಡ: ಹುಟ್ಟುತ್ತ ಅಣ್ಣ-ತಮ್ಮಂದಿರು, ಬೆಳೆಯುತ್ತ ದಾಯಾದಿಗಳು ಎನ್ನುತ್ತಾರೆ. ಅದು ನಿಜಾನೇ ಇರಬೇಕು. ಏಕೆಂದರೆ ಆಸ್ತಿಗಾಗಿ ದೊಡ್ಡಪ್ಪನ ಮಕ್ಕಳೇ, ತನ್ನ ಚಿಕ್ಕಪ್ಪನ ಮಗಳ ಕೊಲೆ ಮಾಡಿದ್ದ ಘಟನೆ ಧಾರವಾಡದಲ್ಲಿ ನಡೆದಿದೆ.
ಕಳೆದ ಆಗಸ್ಟ್ ನಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದ್ದು, ಪ್ರಕರಣ ಸಂಬಂಧ ಮೃತ ಸಕ್ಕುಬಾಯಿ ಸಂಬಂಧಿಕರಾದ ಜಗದೀಶ್ ಜಗತಾಪ, ಶ್ರೀಕಾಂ ಜಗತಾಪ, ರುಕ್ಮವ್ವ ಜಗತಾಪ, ಸೀತವ್ವ ಜಗತಾಪ ಹಾಗೂ ತುಕಾರಾಂ ಕಣಕಿಕೊಪ್ಪ ಎಂಬವರನ್ನ ಬಂಧಿಸಿ ಜೈಲಿಗೆ ಕಳಿಸಲಾಗಿದೆ.
ಏನಿದು ಪ್ರಕರಣ?: ಧಾರವಾಡ ತಾಲೂಕಿನ ಡೊರಿ ಗ್ರಾಮದ ಸಕ್ಕುಬಾಯಿ ಎಂಬ ಮಹಿಳೆಯ ಕುತ್ತಿಗೆಗೆ ಹಗ್ಗದಿಂದ ಜಗ್ಗಿ ಕೊಲೆ ಮಾಡಿ ನಂತರ ಸುಟ್ಟು ಹಾಕಿದ್ದರು. ಬಳಿಕ ಈ ಕೊಲೆಯನ್ನ ಅಸಹಜ ಸಾವು ಎಂದು ಆರೋಪಿಗಳು ತಾವೇ ನಿಂತು ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು.
ಸಕ್ಕುಬಾಯಿಗೆ ಕೊಲೆಯಾಗುವ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು ಎಂದು ತಿಳಿದುಬಂದಿತ್ತು. ಆದ್ರೆ ಮೃತಳ ಶವದ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಇದು ಕೊಲೆ ಎಂದು ಗೊತ್ತಾಗಿದೆ.
ಇದರ ಜಾಡನ್ನು ಹಿಡಿದು ಬೆನ್ನಟ್ಟಿದ್ದ ಧಾರವಾಡ ಅಳ್ನಾವರ ಪೊಲೀಸರು, 5 ಜನರನ್ನ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಆಕೆಗೆ ಗ್ರಾಮದ ಯುವಕನನ್ನ ಏಕೆ ಮದುವೆ ಮಾಡಿ ಕೊಟ್ಟಿರಿ ಎಂದು ದ್ವೇಷದಿಂದ ಹಾಗೂ ಆಕೆಯ ಆಸ್ತಿ ಹೊಡೆಯಲು ಈ ಕೊಲೆ ನಡೆದಿದೆ ಎಂಬ ಸಂಗತಿ ಹೊರ ಬಿದ್ದಿದೆ.