ಚಿತ್ರದುರ್ಗ: ಅನ್ಯ ಧರ್ಮದೊಂದಿಗೆ ಪ್ರೇಮ ವಿವಾಹವಾದ ತಂಗಿಯ ಜೀವನ ಸರಿಪಡಿಸಲು ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ಆಗಮಿಸುತ್ತಿದ್ದ ಸಹೋದರರ ಕಾರು ಪಲ್ಟಿಯಾಗಿ ಒಂದೇ ಕುಟುಂಬದ ಇಬ್ಬರು ಅಣ್ತಮ್ಮಂದಿರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ಹೊರವಲಯದಲ್ಲಿ ನಡೆದಿದೆ.
ಅಕ್ರಂ(27) ಹಾಗೂ ಇರ್ಫಾನ್(24) ಮೃತಪಟ್ಟ ಸಹೋದರರು. ಶಿವಮೊಗ್ಗದಿಂದ ತಂಗಿಯ ಭೇಟಿಗಾಗಿ ತಾಯಿ ಸಹಿತ ಇಬ್ಬರು ಮಕ್ಕಳು ಚಿತ್ರದುರ್ಗಕ್ಕೆ ಆಗಮಿಸುತ್ತಿದ್ದರು. ಆಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಅಕ್ರಂ ಸ್ಥಳದಲ್ಲಿಯೇ ಬುಧವಾರ ರಾತ್ರಿ ಅಸುನೀಗಿದ್ದನು.
ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ತಾಯಿ ಹಾಗು ಇನ್ನೊಬ್ಬ ಮಗನಾದ ಇರ್ಫಾನ್ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇರ್ಫಾನ್ ಕೂಡ ಕೊನೆಯುಸಿರೆಳೆದಿದ್ದಾನೆ. ತಾಯಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ದಾವಣಗೆರೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಲ್ಲದೇ ಸಹೋದರಿ ಬದುಕನ್ನು ಸರಿಮಾಡಲು ಬಂದ ಸೋದರರು ಸ್ಮಶಾನ ಸೇರುವಂತಾಗಿದ್ದು, ಹೊಸ ಬಾಳಿಗೆ ಕಾಲಿಟ್ಟ ಯುವತಿಗೆ ಶುಭ ಹಾರೈಸಬೇಕಿದ್ದ ಕುಟುಂಬಸ್ಥರು ಹಿಡಿಶಾಪ ಹಾಕುವಂತಾಗಿದೆ.
ಸದ್ಯ ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv