ತುಮಕೂರು: ತಂದೆಯ ಸಾವಿನ ಬಳಿಕ ಅನುಕಂಪದ ಆಧಾರದ ಮೇಲೆ ಸಿಗಲಿರುವ ಸರ್ಕಾರಿ ಕೆಲಸ ತಮ್ಮನಿಗೆ ಸಿಗಲಿದೆ ಎಂಬ ದ್ವೇಷದಿಂದ ಸ್ವತಃ ಅಣ್ಣನೇ ತಮ್ಮನನ್ನು ಕೊಂದ ಘಟನೆ ತುಮಕೂರು ನಗರದ ಸರಸ್ವತಿಪುರಂ ನಲ್ಲಿ ನಡೆದಿದೆ.
ಕಿರಣ್ (17) ತಮ್ಮನನ್ನೇ ಕೊಂದ ಅಣ್ಣ. ಕಿರಣ್ ತನ್ನ 11 ವರ್ಷದ ತಮ್ಮ ಕಿಶೋರ್ ನನ್ನು ಕೊಲೆ ಮಾಡಿದ್ದಾನೆ. ಕಿರಣ್ ಹಾಗೂ ಕಿಶೋರ್ ಅವರ ತಂದೆ ಪುಟ್ಟಯ್ಯ ಕೇಂದ್ರ ಸರ್ಕಾರಿ ನೌಕರಿಯಲ್ಲಿದ್ದರು. ಅಲ್ಲದೆ ಎರಡು ವರ್ಷದ ಹಿಂದೆ ಅಕಾಲಿಕ ಮರಣ ಹೊಂದಿದ್ದರು.
ಪುಟ್ಟಯ್ಯ ಅವರ ಇಬ್ಬರ ಮಕ್ಕಳಲ್ಲಿ ಆರೋಪಿ 17 ವರ್ಷದ ಕಿರಣ್ ಹಿರಿಯನಾಗಿದ್ದನು. ಮೃತ ಕಿಶೋರ್ 11 ವರ್ಷದವನಾಗಿದ್ದನು. 18 ವರ್ಷ ತುಂಬಿದ ಕೂಡಲೇ ಮುಂದಿನ ವರ್ಷ ಕಿರಣ್ಗೆ ಅನುಕಂಪದ ಆಧಾರದ ಮೇಲೆ ತಂದೆಯ ಕೆಲಸ ಸಿಗುವುದಿತ್ತು.
ಕಿರಣ್ ವಿಪರೀತ ಮದ್ಯ ವ್ಯಸನಿಯಾಗಿದ್ದರಿಂದ ಈತನ ಬದಲು ತಮ್ಮ ಕಿಶೋರ್ ಗೆ ಆ ಕೆಲಸವನ್ನು ನೀಡಲು ಮನೆಯವರು ನಿರ್ಧರಿಸಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಕಿರಣ್ ಮಂಗಳವಾರ ರಾತ್ರಿ ಮನೆಯಲ್ಲಿ ಕುಟುಂಬದವರ ಜೊತೆ ಜಗಳ ತೆಗೆದು ಚಾಕುವಿನಿಂದ ಇರಿದು ತಮ್ಮನ ಹತ್ಯೆ ಮಾಡಿದ್ದಾನೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸರು ಆರೋಪಿ ಕಿರಣ್ನನ್ನು ಬಂಧಿಸಿದ್ದಾರೆ.