ಗದಗ: ಪ್ರೀತಿಸಿ ಮದುವೆಯಾಗಿದ್ದ ಅಕ್ಕನ ಮನೆಗೆ ನುಗ್ಗಿದ ತಮ್ಮ ಗೂಂಡಾಗಿರಿ ಮಾಡಿದ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಚೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಾಚೇನಹಳ್ಳಿ ರಮೇಶ್ ತಳವಾರ ಗೂಂಡಾಗಿರಿ ಮಾಡಿದ ತಮ್ಮ. 12 ವರ್ಷಗಳ ಹಿಂದೆ ನಿಂಗಮ್ಮ ಅವರ ಮೊದಲ ಪತಿ ಮೃತಪಟ್ಟಿದ್ದರು. ಆಗಿನಿಂದಲೂ ಒಬ್ಬಂಟಿಯಾಗಿದ್ದ ನಿಂಗಮ್ಮ, ಕಳೆದ ವರ್ಷ ಮಾವ ನಾಗರಾಜ್ ಅವರನ್ನೇ ಪ್ರೀತಿಸಿ ಮದುವೆ ಆಗಿದ್ದಾರೆ.
ಪ್ರೀತಿಸಿ ಮದುವೆಯಾಗಿದ್ದಕ್ಕೆ ರಮೇಶ್, ತನ್ನ ಅಕ್ಕನ ಮನೆಗೆ ಹೋಗಿ ಗಲಾಟೆ ಮಾಡಿದ್ದಾನೆ. ಅಲ್ಲದೆ ತನ್ನ ಅಕ್ಕ ನಿಂಗಮ್ಮ ಹಾಗು ಬಾವ ನಾಗರಾಜ್ ಮೇಲೆ ಹಲ್ಲೆ ನಡೆಸಿದ್ದಾನೆ. ತಮ್ಮ ರಮೇಶ್ ಗಲಾಟೆಗೆ ನಿಂಗಮ್ಮ ಕಂಗಾಲಾಗಿದ್ದಾರೆ.
ರಮೇಶ್ಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದಾರೆ. ಆದರೂ ಸಹ ತನ್ನ ಸಹೋದರಿ ನಿಂಗಮ್ಮರ ಅಪ್ರಾಪ್ತ ಮಗಳ ಜೊತೆ ಮದುವೆ ಮಾಡಿಕೊಡಬೇಕು ಎಂದು ಕಿರುಕುಳ ನೀಡುತ್ತಿದ್ದಾನೆ. ಇಷ್ಟು ಮಾತ್ರವಲ್ಲದೆ ಬಂಗಾರ, 70 ಸಾವಿರ ಹಣ ಲೂಟಿ ಮಾಡಿ ರಮೇಶ್ ದಾಖಲೆಗಳಿಗೆ ಬೆಂಕಿ ಹಚ್ಚಿದ್ದಾನೆ. ಈ ಘಟನೆ ಬಗ್ಗೆ ದೂರು ದಾಖಲಿಸಿದರೂ ಪೊಲೀಸರು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ದಂಪತಿ ಆರೋಪಿಸಿದ್ದಾರೆ.