ಚಿತ್ರದುರ್ಗ: ಕೋಟೆನಾಡಿನಲ್ಲಿ ಕಳೆದ 15 ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ 3 ತಿಂಗಳ ಹಿಂದಷ್ಟೇ ನಿರ್ಮಾಣವಾಗಿದ್ದ ಸೇತುವೆಯೊಂದು ಕೊಚ್ಚಿ ಹೋಗಿದೆ.
ಚಳ್ಳಕೆರೆ ತಾಲೂಕಿನ ಯಲಗಟ್ಟೆ, ಗೊಲ್ಲರಹಟ್ಟಿ ರಸ್ತೆ ಸಂಪರ್ಕ ಕಲ್ಪಿಸುವ ಈ ಸೇತುವೆಯನ್ನು 3 ತಿಂಗಳ ಹಿಂದೆಯಷ್ಟೇ ನಿರ್ಮಾಣ ಮಾಡಲಾಗಿತ್ತು. ಇಂದು ಸೇತುವೆ ಕೊಚ್ಚಿಹೋಗಿದ್ದರಿಂದ ಚೆಕ್ಕೇನಹಳ್ಳಿ-ಬೆಳಗೆರೆ ಹಾದು ಹೋಗುವ ರಸ್ತೆ ಮಾರ್ಗ ಕಡಿತಗೊಂಡಿದೆ.
ಮಳೆ ನೀರಿನ ರಭಸಕ್ಕೆ ಸೇತುವೆ ಕೊಚ್ಚಿ ಹೋಗಿದ್ದು, ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ. ಸ್ಥಳಕ್ಕೆ ಆಗಮಿಸಿದ ಶಾಸಕ ರಘುಮೂರ್ತಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿದರು.
10 ವರ್ಷಗಳ ನಂತರ ತುಂಬಿತು ಕೆರೆ: ಕಳೆದ ರಾತ್ರಿ ಸತತ ಮೂರು ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದ ಪರಿಣಾಮ ರಾಯಭಾಗ ತಾಲೂಕಿನ ಸೌದತ್ತಿ ಗ್ರಾಮದ ಕೆರೆ ಸಂಪೂರ್ಣ ಭರ್ತಿಯಾಗಿದೆ. ಈ ಕೆರೆಯು ಸುಮಾರು 10 ವರ್ಷಗಳಿಂದ ತುಂಬಿರಲಿಲ್ಲ. ಆದರೆ ಈ ವರ್ಷ ಕೇವಲ ಮೂರೇ ಗಂಟೆಯ ಮಳೆಗೆ ಕೆರೆ ತುಂಬಿದ್ದರಿಂದ ಜನ ಸಂತಸಗೊಂಡಿದ್ದಾರೆ.
20ಕ್ಕೂ ಹೆಚ್ಚು ಮನೆಗಳಿಗೆ ಕೆರೆಯ ನೀರು ನುಗ್ಗಿ ಭಾರೀ ಅವಾಂತರ ಸೃಷ್ಟಿಯಾಗಿದ್ದು, ಇಲ್ಲಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಳೆಯ ನೀರು ಹೊರಹಾಕಲು ಗ್ರಾಮಸ್ಥರು ಪಡಬಾರದ ಪಾಡು ಪಡುತ್ತಿದ್ದಾರೆ.