ರಾಯಚೂರು: ಬಿಸಿಲುನಾಡು ರಾಯಚೂರಿನಲ್ಲಿ ರಾತ್ರಿಯಿಡಿ ಸುರಿದ ಭಾರೀ ಮಳೆಗೆ ಮಸ್ಕಿ ತಾಲೂಕಿನ ಸಂತೆಕೆಲ್ಲೂರು ಬಳಿಯ ಸೇತುವೆ ಬಳಿಯ ರಸ್ತೆ ಕೊಚ್ಚಿಹೋಗಿದೆ.
ಗಡ್ಡಿ ಹಳ್ಳ ಅಥವಾ ಸಿಂಗಸಿ ಹಳ್ಳ ಎಂದು ಕರೆಯುವ ಸಂತೆಕಲ್ಲೂರು ಬಳಿಯ ಹಳ್ಳಕ್ಕೆ ಅಡ್ಡಲಾಗಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿತ್ತು. ಆದರೆ ಈ ರಸ್ತೆ ರಾತ್ರಿ ಮಳೆಯಿಂದ ಹಳ್ಳದಲ್ಲಿ ಹರಿದ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ರಾಷ್ಟ್ರೀಯ ಹೆದ್ದಾರಿ 150 ಎಗೆ ಸೇರಿದ ರಸ್ತೆ ಇದಾಗಿದ್ದು ಈಗ ಬೀದರ್, ಕಲಬುರಗಿ, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ ಹಾಗೂ ಬೆಂಗಳೂರು ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ.
ಬದಲಿ ಮಾರ್ಗವಾಗಿ ಸಾರ್ವಜನಿಕರು 30 ಕಿ.ಮೀ ಹೆಚ್ಚು ದೂರ ಪ್ರಯಾಣ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷ ಗುಂಡಿಬಿದ್ದು ಸೇತುವೆ ಹಾಳಾಗಿತ್ತು. ಹೀಗಾಗಿ ಸೇತುವೆ ಶಿಥಿಲಗೊಂಡಿದ್ದರಿಂದ ಅಲ್ಲೇ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿತ್ತು.
ಈಗ ರಸ್ತೆ ಕೊಚ್ಚಿಹೋಗಿರುವುದರಿಂದ ಪ್ರಯಾಣಿಕರು, ವಿದ್ಯಾರ್ಥಿಗಳು, ಅಕ್ಕಪಕ್ಕದ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ.