ಗಾಂಧೀನಗರ: ವಡೋದರಾದಲ್ಲಿ ಸೇತುವೆಯ ಸ್ಲ್ಯಾಬ್ ಕುಸಿದು 11 ಜನರು ದುರಂತ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಎಂಜಿನಿಯರ್ಗಳನ್ನು ಅಮಾನತುಗೊಳಿಸಲಾಗಿದೆ.
ವಡೋದರಾ ಜಿಲ್ಲೆಯ ಮಹಿಸಾಗರ್ ನದಿಗೆ ಅಡ್ಡಲಾಗಿ ಇರುವ ಮುಜ್ಪುರ್-ಗಂಭೀರ ಸೇತುವೆಯ ಸ್ಲ್ಯಾಬ್ನ ಒಂದು ಭಾಗ ಕುಸಿದು, 11 ಮಂದಿ ಮೃತಪಟ್ಟರು. ದುರಂತ ಸಂಭವಿಸಿದ ಮರುದಿನವೇ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಉನ್ನತ ಮಟ್ಟದ ಪರಿಶೀಲನೆ ನಂತರ ರಸ್ತೆ ಮತ್ತು ಕಟ್ಟಡ (ಆರ್ & ಬಿ) ಇಲಾಖೆಯ ನಾಲ್ವರು ಎಂಜಿನಿಯರ್ಗಳನ್ನು ಅಮಾನತುಗೊಳಿಸಿದ್ದಾರೆ.
ರಾಜ್ಯಾದ್ಯಂತ ಎಲ್ಲಾ ಇತರ ಸೇತುವೆಗಳ ಸಂಪೂರ್ಣ ಪರಿಶೀಲನೆ ಮತ್ತು ಸುರಕ್ಷತಾ ಪರಿಶೀಲನೆಗೆ ಮುಖ್ಯಮಂತ್ರಿ ಆದೇಶಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಂಡವರಲ್ಲಿ ಆರ್ & ಬಿ ವಡೋದರಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎನ್.ಎಂ. ನಾಯಕವಾಲಾ, ಉಪ ಕಾರ್ಯನಿರ್ವಾಹಕ ಎಂಜಿನಿಯರ್ಗಳಾದ ಯುಸಿ ಪಟೇಲ್ ಮತ್ತು ಆರ್.ಟಿ. ಪಟೇಲ್ ಮತ್ತು ಸಹಾಯಕ ಎಂಜಿನಿಯರ್ ಜೆ.ವಿ. ಶಾ ಸೇರಿದ್ದಾರೆ.
ಪದ್ರಾ ತಾಲೂಕಿನಲ್ಲಿ ಕುಸಿದು ಬಿದ್ದ ಸ್ಥಳಕ್ಕೆ ರಾಜ್ಯ ಆರ್ & ಬಿ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿ ಭೇಟಿ ನೀಡಿದ ಕೆಲವೇ ಗಂಟೆಗಳ ನಂತರ ನಾಲ್ವರು ಎಂಜಿನಿಯರ್ಗಳನ್ನು ಅಮಾನತುಗೊಳಿಸಲಾಗಿದೆ. ಅಪಘಾತದಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ. ನಾಪತ್ತೆಯಾದ ಮೂವರಿಗೆ ಹುಡುಕಾಟ ನಡೆಯುತ್ತಿದೆ.