ಚಿಕ್ಕಮಗಳೂರು: ಬೈಕಿನಲ್ಲಿ ಸಂಚರಿಸುವಾಗಲೇ ಸೇತುವೆ ಕುಸಿದು ಬಿದ್ದ ಪರಿಣಾಮ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಲಿಂಗನಾಡು ಗ್ರಾಮದಲ್ಲಿ ನಡೆದಿದೆ.
ಮಲೆನಾಡು, ಕಾಫಿನಾಡಿನಲ್ಲಿ ಸುರಿಯುತ್ತಿರುವ ಭೀಕರ ಮಳೆಗೆ ಜನ ಹೈರಾಣಾಗಿದ್ದಾರೆ. ಈ ನಡುವೆ ಭಾನುವಾರ ಸುರಿದ ಮಳೆ ಚಿಕ್ಕಮಗಳೂರಿನ ಮಾಲಿಂಗನಾಡು ಗ್ರಾಮದಲ್ಲಿ ಅವಾಂತರ ಸೃಷ್ಟಿಸಿದೆ. ಮಾಲಿಂಗನಾಡು ಗ್ರಾಮದ ಹಿರೇಬೈಲು-ಕೂವೆ ಗ್ರಾಮವನ್ನು ಸಂಪರ್ಕಿಸುವ ಸೇತುವೆ ಮಳೆಗೆ ಕುಸಿದು ಬಿದ್ದಿದೆ. ಬೈಕ್ ಸಂಚರಿಸುವಾಗಲೇ ಏಕಾಏಕಿ ಸೇತುವೆ ಕುಸಿದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಮೊದಲು ಆತನನ್ನು ಸ್ಥಳೀಯರು ಮೂಡಿಗೆರೆ ಆಸ್ಪತ್ರೆಗೆ ಸೇರಿಸಿದ್ದರು, ಆದರೆ ಸವಾರನ ಸ್ಥಿತಿ ಗಂಭೀರವಿದ್ದ ಕಾರಣಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ. ಇದನ್ನೂ ಓದಿ:ಕುಸಿದ ಸೇತುವೆಯ ಮಧ್ಯೆ ಸಿಲುಕಿದ ಕಾರುಗಳು: ವಿಡಿಯೋ ವೈರಲ್
ಸುಮಾರು 40-50 ಅಡಿ ಆಳಕ್ಕೆ ಸೇತುವೆ ಕುಸಿದಿದ್ದು, ಅದರ ನಡುವೆಯೇ ಬೈಕ್ ಸಿಕ್ಕಿಬಿದ್ದಿದೆ. ಅಲ್ಲದೆ ಸೇತುವೆ ಕುಸಿತದಿಂದ ಹಿರೇಬೈಲು-ಕೂವೆ ಸಂಪರ್ಕ ಕಡಿತಗೊಂಡಿದ್ದು, ಈ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಬೇರೆ ಪರ್ಯಾಯ ಮಾರ್ಗಗಳು ಇಲ್ಲ. ಆದ್ದರಿಂದ ಇಲ್ಲಿನ ಜನರು ಪರದಾಡುತ್ತಿದ್ದಾರೆ.