ಲಕ್ನೌ: ವರ ನೀರಿನ ಗ್ಲಾಸ್ ಎತ್ತಲಿಲ್ಲ ಎಂದು ವಧು ಮದುವೆ ಮುರಿದ ಅಚ್ಚರಿಯ ಘಟನೆ ಉತ್ತರ ಪ್ರದೇಶದ ಲಕ್ಕೀಂಪುರದ ಲೇರಿಯಲ್ಲಿ ನಡೆದಿದೆ.
ವಧುವಿನ ತಂದೆ ತನ್ನ ಮಗಳ ಮದುವೆಯನ್ನು ಮಿತೌಲಿ ಗ್ರಾಮದ ಯುವಕನೊಂದಿಗೆ ನಿಶ್ಚಯ ಮಾಡಿದ್ದರು. ಗುರುವಾರ ಈ ಜೋಡಿಯ ನಿಶ್ಚಿತಾರ್ಥ ಕೂಡ ನಡೆದಿತ್ತು. ಮದುವೆ ದಿನ ವರನ ಕುಟುಂಬದವರು ಮೆರವಣಿಗೆ ಮೂಲಕ ಮದುವೆ ನಡೆಯುವ ಸ್ಥಳಕ್ಕೆ ಆಗಮಿಸಿದ್ದರು.
ಈ ವೇಳೆ ಪೂಜೆಯ ಸಂದರ್ಭದಲ್ಲಿ ಪುರೋಹಿತರು ಗ್ಲಾಸ್ ಎತ್ತಿಕೊಂಡು ನೀರನ್ನು ಸಿಂಪಡಿಸಲು ಹೇಳಿದ್ದಾರೆ. ಆದರೆ ವರನಿಗೆ ಗ್ಲಾಸ್ ಎತ್ತಲು ಸಾಧ್ಯವಾಗಲಿಲ್ಲ. ವರನ ಈ ವರ್ತನೆ ಕಂಡು ಅಲ್ಲಿದ್ದ ಮಹಿಳೆಯರಿಗೆ ಅನುಮಾನ ಬಂದಿದೆ. ಬಳಿಕ ವರನನ್ನು ಮನೆಯ ಒಳಗೆ ಕರೆಸಿಕೊಂಡರು.
ಮನೆಯ ಒಳಗೆ ಹೋಗಿದ್ದ ತಕ್ಷಣ ವಧುವಿನ ಕಡೆಯವರು ಮತ್ತೆ ನೀರಿನ ಗ್ಲಾಸ್ ಎತ್ತಲು ವರನಿಗೆ ಹೇಳಿದ್ದಾರೆ. ವರ ನೀರಿನ ಗ್ಲಾಸ್ ಎತ್ತಲು ಪ್ರಯತ್ನಿಸಿದಾಗ ಆತನ ಕೈ ನಡುಗಿದೆ. ಅಲ್ಲದೆ ಆತನಿಗೆ ಗ್ಲಾಸ್ ಎತ್ತಲು ಸಾಧ್ಯವಾಗಲಿಲ್ಲ. ಇದನ್ನು ನೋಡಿದ ವಧು ಆತನನ್ನು ಮದುವೆಯಾಗಲು ನಿರಾಕರಿಸಿದ್ದಳು.
ವಧು ಈ ಮದುವೆಯನ್ನು ನಿರಾಕರಿಸುತ್ತಿದ್ದಂತೆ ವರನ ಕುಟುಂಬದವರು ಜಗಳ ಶುರು ಮಾಡಿದ್ದಾರೆ. ಇದರಿಂದ ಭಯಗೊಂಡ ವಧುವಿನ ತಂದೆ ಉತ್ತರಪ್ರದೇಶದ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಎರಡೂ ಕಡೆಯವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಮಾತುಕತೆ ನಡೆಸಿದ್ದಾರೆ.
ಮಾತುಕತೆಯ ಬಳಿಕ ಪೊಲೀಸರು ವಧುವನ್ನು ಠಾಣೆಗೆ ಕರೆಸಿ ಮಾತನಾಡಿದ್ದರು. ಈ ವೇಳೆ ವಧು ಮದುವೆ ಆಗುವುದಕ್ಕೆ ನಿರಾಕರಿಸಿದಳು. ಈ ವೇಳೆ ಪೊಲೀಸರು ಸಂಧಾನ ಮಾಡಲು ಯತ್ನಿಸಿದರು. ಆದರೆ ಎರಡೂ ಕುಟುಂಬದವರು ರಾಜಿಗೆ ಒಪ್ಪಲಿಲ್ಲ. ಮದುವೆಗೆ ಕೊಟ್ಟ ತಮ್ಮ ತಮ್ಮ ವಸ್ತುಗಳನ್ನು ಇಬ್ಬರೂ ಪರಸ್ಪರ ಹಿಂದಿರುಗಿಸಿಕೊಂಡರು.
ವರನ ಒಂದು ಕೈ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಅಲ್ಲದೆ ಆತನಿಗೆ ತೂಕದ ವಸ್ತು ಎತ್ತಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ವಧು ಆತನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ ಎಂಬುದಾಗಿ ವರದಿಯಾಗಿದೆ.