ಕನ್ನಡ ಸಿನಿಮಾಗಳು ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದಂತೆಯೇ ಬಾಲಿವುಡ್ ನಟ ನಟಿಯರ ವರಸೆಯೇ ಬದಲಾಗಿದೆ. ಭಾರತೀಯ ಸಿನಿಮಾ ರಂಗವೆಂದರೆ ಅದು ಕೇವಲ ಬಾಲಿವುಡ್ ಎನ್ನುತ್ತಿದ್ದವರು ಇದೀಗ ತಮ್ಮ ಮಾತಿನ ಧಾಟಿಯನ್ನೇ ಬದಲಾಯಿಸುತ್ತಿದ್ದಾರೆ. ಹಿಂದಿ ಹೊರತಾಗಿ ಉಳಿದ ಚಿತ್ರಗಳನ್ನು ಪ್ರಾದೇಶಿಕ ಸಿನಿಮಾಗಳೆಂದು ಕರೆಯುತ್ತಿದ್ದವರು ಇದೀಗ ಭಾರತೀಯ ಸಿನಿಮಾ ರಂಗ ಎಂದರೆ ಎಲ್ಲ ಚಿತ್ರರಂಗವನ್ನೂ ಒಳಗೊಂಡಿರುವಂಥದ್ದು ಎನ್ನುತ್ತಿದ್ದಾರೆ.
ಈ ಮಾತಿಗೆ ಸಾಕ್ಷಿ ಎನ್ನುವಂತೆ ಬೆಂಗಳೂರಿಗೆ ಬಂದಿಳಿದಿರುವ ಬಾಲಿವುಡ್ ನಟ ಅನುಪಮ್ ಖೇರ್ (Anupam Kher), ‘ವುಡ್’ ಎನ್ನುವುದಕ್ಕೆ ಬಾಯ್ಕಾಟ್ ಮಾಡಿ ಎಂದು ಹೇಳಿದ್ದಾರೆ. ಘೋಸ್ಟ್ ಸಿನಿಮಾದ ಶೂಟಿಂಗ್ ಗಾಗಿ ಬೆಂಗಳೂರಿಗೆ ಬಂದಿರುವ ಅನುಪಮ್ ಖೇರ್, ‘ಭಾರತೀಯ ಚಿತ್ರರಂಗ ಎಂದರೆ ಅಲ್ಲರನ್ನೂ ಒಳಗೊಂಡಿದ್ದು. ಇದೀಗ ವುಡ್ ಎನ್ನುವುದನ್ನೇ ಕಿತ್ತು ಹಾಕಿ. ಅದನ್ನು ಬಾಯ್ಕಾಟ್ ಮಾಡಿದರೆ, ನಾವೆಲ್ಲರೂ ಒಂದಾಗುತ್ತೇವೆ’ ಎಂದು ಹೇಳಿದ್ದಾರೆ. ಇದನ್ನೂ ಓದಿ: 2ನೇ ಮದುವೆ ಸುದ್ದಿಗೆ ಸ್ಪಷ್ಟನೆ ನೀಡಿದ ಕಿರುತೆರೆ ನಟಿ ಸ್ವಾತಿ
ಅನುಪಮ್ ಖೇರ್ ಮಾತ್ರವಲ್ಲ, ಹಿಂದಿಯ ಅನೇಕ ಕಲಾವಿದರು ಇಂತಹ ಮಾತುಗಳನ್ನು ಆಡಿದ್ದಾರೆ. ಬಾಲಿವುಡ್ ಚಿತ್ರರಂಗ ಮಕಾಡೆ ಮಲಗುತ್ತಿದ್ದಂತೆಯೇ ಈ ಮಾತು ಗಟ್ಟಿಯಾಗಿದೆ. ದಕ್ಷಿಣದ ಸಿನಿಮಾಗಳು ಬಾಲಿವುಡ್ ಅಂಗಳದಲ್ಲಿ ಹೆಚ್ಚು ಸದ್ದು ಮಾಡಿದ್ದೇ ಈ ಮಾತುಗಳ ಬದಲಾವಣೆ ಕಾರಣವಾಗಿದೆ. ಅಲ್ಲದೇ, ಅನುಪಮ್ ಖೇರ್ ಇದೀಗ ಕನ್ನಡ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಕನ್ನಡ ಚಿತ್ರವನ್ನು ಒಪ್ಪಿಕೊಂಡಿದ್ದಾರೆ.
ಅಂದ ಹಾಗೆ ಅನುಪಮ್ ಖೇರ್ ಸದ್ಯ ಶ್ರೀನಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಘೋಸ್ಟ್ (Ghost) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶಿವರಾಜ್ ಕುಮಾರ್ (Shivraj Kumar) ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾ ಎರಡು ಭಾಗದಲ್ಲಿ ಮೂಡಿ ಬರಲಿದೆ. ಈ ಚಿತ್ರದಲ್ಲಿ ಶಿವಣ್ಣ ಘೋಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ.