ದಾವಣಗೆರೆ: ಕೊಲೆಯಾಗಿದ್ದೀನೆಂದು ಫೋಟೋ ಹರಿಬಿಟ್ಟಿದ್ದು, ಇದೀಗ ಯುವಕ ಪೊಲೀಸರ ಅತಿಥಿಯಾಗಿದ್ದಾನೆ.
ಯಲ್ಲಮ್ಮ ನಗರ ನಿವಾಸಿ ಪರುಶುರಾಮ ಬಂಧಿತ ಯುವಕ. ಈತ ತನ್ನನ್ನು ಕೊಲೆ ಮಾಡಿದ್ದಾರೆ ಎಂದು ತಾನೇ ಫೋಟೋಗಳನ್ನ ವಾಟ್ಸಪ್ ಮಾಡಿದ್ದನು. ಈತನ ಹುಚ್ಚಾಟದಿಂದ ಪೊಲೀಸರು ಕಂಗಾಲಾಗಿದ್ದು, ಕೊನೆಗೆ ದಾವಣಗೆರೆ ಜಿಲ್ಲೆಯ ಪೋಲಿಸರು ಈತನ ಡ್ರಾಮಾಕ್ಕೆ ಬ್ರೇಕ್ ಹಾಕಿ ಬಂಧಿಸಿದ್ದಾರೆ.
ಶನಿವಾರ ರಾತ್ರಿ ಮುಖದ ಮೇಲೆ ಕುಂಕುಮ ಹಾಕಿಕೊಂಡು ಕೊಲೆಯಾದ ರೀತಿಯಲ್ಲಿ ಫೋಟೋ ತೆಗೆದು ವಾಟ್ಸಪ್ಗೆ ಅಪ್ಲೋಡ್ ಮಾಡಿದ್ದನು. ಇದನ್ನು ನೋಡಿ ಭಯಗೊಂಡ ಮನೆಯವರು, ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ವಾರದಲ್ಲಿ ನಾಲ್ಕನೇ ಕೊಲೆ ನಡೆದಿದೆ ಎಂದು ಇಡೀ ದಾವಣಗೆರೆಯಾದ್ಯಂದ ಸುದ್ದಿಯಾಗಿತ್ತು.
ಇತ್ತ ತಲೆಕೆಡಿಸಿಕೊಂಡಿದ್ದ ಪೊಲೀಸರು ಇಡೀ ದಿನ ಪರಶುರಾಮನ ಶವಕ್ಕಾಗಿ ಜಿಲ್ಲೆಯಾದ್ಯಂತ ಹುಡುಕಾಟ ನಡೆಸಿದ್ದಾರೆ. ಆಗ ಪೊಲೀಸರ ಕೈಗೆ ಪರಶುರಾಮ ಸಿಕ್ಕಿಬಿದ್ದಿದ್ದಾನೆ. ಅಲ್ಲದೆ ನಾನೇ ಹೀಗೆ ಮಾಡಿಕೊಂಡಿದ್ದು ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಆದರೆ ಇಡೀ ದಿನ ಇಲಾಖೆ ಪರಶುರಾಮನ ಶವಕ್ಕಾಗಿ ಹುಡುಕಾಟ ನಡೆಸಿದ್ದು, ಯುವಕನ ಹುಚ್ಚಾಟದಿಂದ ಪೊಲೀಸರು ಕಂಗಾಲಾಗಿದ್ದರು.