ಬೆಂಗಳೂರು: ನಗರದ ರಸ್ತೆ ಗುಂಡಿಗೆ ಮತ್ತೊಂದು ಬಲಿಯಾಗಿದೆ. ಉತ್ತರಹಳ್ಳಿ ರೋಡ್ನಲ್ಲಿ ಇಂದು ಬೆಳಗ್ಗೆ ಸುಮಾರು 8.30ರ ವೇಳೆಗೆ ನಡೆದ ಅಪಘಾತದಲ್ಲಿ ಯುವಕನೊಬ್ಬ ತನ್ನ ಪ್ರಾಣ ಕಳೆದುಕೊಂಡಿದ್ದಾನೆ.
20 ವರ್ಷ ವಯಸ್ಸಿನ ತೇಜಸ್ವಿ ಗೌಡ ಮೃತ ಯುವಕ. ತೇಜಸ್ವಿ ತನ್ನ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋಗಿ ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದಿದ್ದಾನೆ. ಇದೇ ಸಂದರ್ಭದಲ್ಲಿ ಹಿಂದಿನಿಂದ ವೇಗವಾಗಿ ಬಂದ ಲಾರಿ ಯುವಕನ ಮೇಲೆ ಹರಿದಿದೆ. ಪರಿಣಾಮ ತೇಜಸ್ವಿ ಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸದ್ಯ ಈತನ ಮೃತದೇಹವನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಮೂಲಕ ನಗರದ ರಸ್ತೆ ಗುಂಡಿಗೆ ಬಿದ್ದು ಮೃತಪಟ್ಟಿರುವುದು ಇದು 5ನೇ ಪ್ರಕರಣವಾಗಿದೆ.
ಇನ್ನು ಅಪಘಡಗಳಿಂದ ಎಚ್ಚೆತ್ತ ಬಿಬಿಎಂಪಿ ಗುಂಡಿ ಮುಚ್ಚುವ ಪ್ರಕ್ರಿಯೆ ಪ್ರಾರಂಭಿಸಿದೆ. ಮೇಯರ್ ಸಂಪತ್ ರಾಜ್ ನಗರ ಪ್ರದಕ್ಷಿಣೆ ಮಾಡುತ್ತಿದ್ದು, ಚಾಲುಕ್ಯ ಸರ್ಕಲ್ ನಿಂದ ತಪಾಸಣೆ ಆರಂಭ ಮಾಡಿದ್ದಾರೆ. ಚಾಲುಕ್ಯ ಸರ್ಕಲ್ ಬಳಿ ರಸ್ತೆ ಗುಂಡಿಗಳ ಮುಚ್ಚುವಿಕೆ ಕಾಮಗಾರಿ ಪರಿಶೀಲನೆ ಮಾಡಿದ್ದಾರೆ.
https://www.youtube.com/watch?v=QqwmokJ7Bbs