ಸ್ನೇಹಿತರಿಂದ ಗುದದ್ವಾರದ ಮೂಲಕ ಏರ್ ಪಂಪ್- 6 ವರ್ಷದ ಬಾಲಕ ಸಾವು

Public TV
1 Min Read
police 1 1

ಇಂದೋರ್: ಆಟವಾಡುತ್ತಿದ್ದಾಗ 6 ವರ್ಷದ ವಿದ್ಯಾರ್ಥಿಗೆ ಅದೇ ವಯಸ್ಸಿನ ಆತನ ಸ್ನೇಹಿತರು ಗುದದ್ವಾರದ ಮೂಲಕ ಏರ್ ಪಂಪ್ ಮಾಡಿದ್ದರಿಂದ ವಿದ್ಯಾರ್ಥಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

ಘಟನೆ ಕುರಿತು ಭನ್ವಾರ್ ಕುವಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂಜಯ್ ಶುಕ್ಲಾ ಮಾಹಿತಿ ನೀಡಿದ್ದು, ಮೃತ ವಿದ್ಯಾರ್ಥಿಯನ್ನು ಕನ್ಹಾ ಯಾದವ್ ಎಂದು ಗುರುತಿಸಲಾಗಿದೆ. ಮೃತ ಬಾಲಕನ ತಂದೆ ಪಾಲ್ಡಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಅದೇ ಪ್ರದೇಶದಲ್ಲಿ ಬಾಲಕನ ಕುಟುಂಬ ವಾಸವಾಗಿದೆ ಎಂದು ತಿಳಿಸಿದರು.

madhya pradesh police

ಆರಂಭಿಕ ತನಿಖೆ ಪ್ರಕಾರ, ಆಟವಾಡುವಾಗ ಬಾಲಕನ ಸ್ನೇಹಿತರು ಗುದದ್ವಾರಕ್ಕೆ ಏರ್ ಕಂಪ್ರೆಸ್ಸರ್ ನಳಿಕೆಯನ್ನು ಇಟ್ಟು ಗಾಳಿ ತುಂಬಿಸಿದ್ದಾರೆ. ಬಾಲಕನ ಹೊಟ್ಟೆ ಪೂರ್ತಿ ಗಾಳಿ ತುಂಬಿದ್ದರಿಂದ ಬಾಲಕ ಸಾವನ್ನಪ್ಪಿರುವ ಕುರಿತು ತಿಳಿದು ಬಂದಿದೆ ಎಂದು ಸಂಜಯ್ ಶುಕ್ಲಾ ತಿಳಿಸಿದ್ದಾರೆ.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ವಿದ್ಯಾರ್ಥಿಯನ್ನು ಮಹಾರಾಜ ಯಶವಂತರಾವ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆಗೆ ವಿದ್ಯಾರ್ಥಿ ಸ್ಪಂದಿಸದ್ದರಿಂದ ಮೃತಪಟ್ಟಿದ್ದಾನೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪರೀಕ್ಷೆ ನಂತರ ವಿದ್ಯಾರ್ಥಿಯ ಸಾವಿಗೆ ನಿರ್ಧಿಷ್ಟ ಕಾರಣ ಏನೆಂಬುದು ತಿಳಿಯುತ್ತದೆ ಎಂದು ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

Police Jeep

ಬಾಲಕನ ತಂದೆ ರಾಮಚಂದ್ರ ಯಾದವ್ ಅವರು ಈ ಕುರಿತು ಮಾಹಿತಿ ನೀಡಿ, ಘಟನೆ ನಂತರ ನನ್ನ ಮಗನ ಸ್ನೇಹಿತರಿಬ್ಬರು ಆತನನ್ನು ಮನೆಗೆ ಕರೆ ತಂದಿದ್ದರು. ಮನೆಗೆ ಬಂದಾಗ ಅವನ ಹೊಟ್ಟೆ ತುಂಬಾ ಊದಿಕೊಂಡಿತ್ತು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದೆ. ನಂತರ ಸ್ನೇಹಿತರು ಏರ್ ಕಂಪ್ರೆಸರ್ ಮೂಲಕ ಅವನ ಹೊಟ್ಟೆಗೆ ಗಾಳಿ ತುಂಬಿದ್ದ ವಿಚಾರ ತಿಳಿಯಿತು ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *