ಬೆಂಗಳೂರು: ಗಾಂಜಾಗೆ 50 ರೂ. ಕೊಟ್ಟಿಲ್ಲ ಎಂದು ಚಾಕುವಿನಿಂದ ಇರಿದು ಬಾಲಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಡಿಜೆ ಹಳ್ಳಿಯಲ್ಲಿ ನಡೆದಿದೆ.
ಡಿಜೆ ಹಳ್ಳಿಯ ಮೋದಿ ರಸ್ತೆ ಬಳಿ ಘಟನೆ ನಡೆದಿದ್ದು, ಮಹಮ್ಮದ್ ವಾಸಿಂ (16)ಕೊಲೆಯಾದ ಬಾಲಕ. ಮೂವರು ದುಷ್ಕರ್ಮಿಗಳು ಮಹಮ್ಮದ್ ವಾಸಿಂ ಎದೆಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಬಾಲಕ ಬೇಕರಿಯಲ್ಲಿ ಕೆಲಸ ಮುಗಿಸಿ ಮರಳುತ್ತಿದ್ದ. ವೇಳೆ ಮೂವರು ದುಷ್ಕರ್ಮಿಗಳು ಗಾಡಿಯಲ್ಲಿ ಬಂದಿದ್ದಾರೆ. ವಾಸಿಂನನ್ನು ರಸ್ತೆಯಲ್ಲೇ ಅಡ್ಡಗಟ್ಟಿ ಗಾಂಜಾಗೆ ಹಣ ಕೇಳಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಹಾಗೂ ವಾಸಿಂ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಾಲಕ ಹಣ ಇಲ್ಲ ಎಂದು ಪಕ್ಕಕ್ಕೆ ಹೋಗಿದ್ದಾನೆ. ಆಗ ಬೈಕಿನಿಂದ ಇಳಿದು ಚಾಕು ಚಾಕುವಿನಿಂದ ಇರಿದು ಕೊಲೆಗೈದಿದ್ದಾರೆ.
ಬಾಲಕ ಮಹಮ್ಮದ್ ವಾಸಿಂ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ. ಬೇಕರಿಯಿಂದ ಮನೆಗೆ ಹೋಗಬೇಕಾದಾಗ ರಸ್ತೆಯಲ್ಲಿ ಅಡ್ಡ ನಿಲ್ಲಿಸಿ ಹಣ ಕೇಳಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿ ಮೂವರು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪೂರ್ವ ವಿಭಾಗ ಡಿಸಿಪಿ ಡಾ.ಶರಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.