ಚಂಡೀಗಢ್: ಮದುವೆ ಆಗಲು ನಿರಾಕರಿಸಿದ್ದಕ್ಕೆ ತರಬೇತುದಾರ ಬಾಕ್ಸಿಂಗ್ ಆಟಗಾರ್ತಿಯನ್ನು ಗುಂಡಿಕ್ಕಿ ಕೊಂದ ಘಟನೆ ಮಂಗಳವಾರ ಹರಿಯಾಣದ ಪಟೌದಿಯಲ್ಲಿ ನಡೆದಿದೆ.
ಸರಿತಾ(25) ಮೃತಪಟ್ಟ ಯುವತಿ. ಸರಿತಾ ಟೇಕ್ವಾಂಡೋ (ಬಾಕ್ಸರ್) ಆಟಗಾರ್ತಿಯಾಗಿದ್ದು, ಆಕೆ ಬಾಕ್ಸಿಂಗ್ ಕಲಿಯುತ್ತಿದ್ದಳು. ಸರಿತಾಗೆ ಬಾಕ್ಸಿಂಗ್ ಹೇಳಿಕೊಡುತ್ತಿದ್ದ ತರಬೇತಿದಾರ ಸೋಮ್ಬೀರ್ ಆಕೆಯನ್ನು ಪ್ರೀತಿಸಲು ಶುರು ಮಾಡಿದ್ದನು.
ಸೋಮ್ಬೀರ್ ಮದುವೆಯಾಗುವಂತೆ ಸರಿತಾ ಬಳಿ ಕೇಳಿಕೊಂಡಿದ್ದಾನೆ. ಆದರೆ ಸರಿತಾ ಇದಕ್ಕೆ ಒಪ್ಪಲಿಲ್ಲ. ಇದರಿಂದ ಕೋಪಗೊಂಡ ತರಬೇತುದಾರ ಆಕೆಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಅಲ್ಲದೆ ಆಕೆಯ ತಾಯಿಗೆ ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ.
ರಾಜ್ಯಮಟ್ಟದ ಕುಸ್ತಿ ಆಟಗಾರನಾಗಿರುವ ಸೋಮ್ಬೀರ್ ಆಗಾಗ ಸರಿತಾ ಮನೆಗೆ ಭೇಟಿ ನೀಡುತ್ತಿದ್ದನು. ಸೋಮ್ಬೀರ್ ವಿರುದ್ಧ ಬಿಲಾಸ್ಪುರ್ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದೆ. ಅಲ್ಲದೆ ಆತ ಯಾವಾಗಲೂ ನಶೆಯಲ್ಲಿ ತೇಲಾಡುತ್ತಿದ್ದನು.
ಸೋಮ್ಬೀರ್, ಸರಿತಾಳನ್ನು ಮದುವೆ ಆಗಲು ಇಚ್ಛಿಸಿದ್ದನು. ಆದರೆ ಸರಿತಾ, ಸೋಮ್ಬೀರ್ ನಶೆ ಮಾಡುವುದನ್ನು ನೋಡಿದ್ದಳು. ಹಾಗಾಗಿ ಆಕೆ ಸೋಮ್ಬೀರ್ ನನ್ನು ಮದುವೆ ಆಗಲು ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಸೋಮ್ಬೀರ್ ಆಕೆಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ.