ಉಡುಪಿ: ಮರವಂತೆಯಲ್ಲಿ ಬೋರ್ ವೆಲ್ನ ಮಣ್ಣು ಕುಸಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾವು ಗೆದ್ದ ರೋಹಿತ್ ಖಾರ್ವಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಇದು ಅಜಾಗರೂಕತೆ ಅಲ್ಲ, ಆಕಸ್ಮಿಕವಾಗಿ ನಡೆದ ಘಟನೆ ಎಂದಿದ್ದಾರೆ.
ನಾವು ನಾಲ್ಕು ಜನ ಬೋರ್ವೆಲ್ ಕೆಲಸಕ್ಕೆ ತೆರಳಿದೆವು. ನಮ್ಮ ಕೆಲಸ ಅಂತಿಮ ಹಂತದಲ್ಲಿತ್ತು. ಏಕಾಏಕಿ ಸುತ್ತ ಇದ್ದ ಮಣ್ಣು ಸುಮಾರು ಹದಿನೈದು ಅಡಿ ಕೆಳಕ್ಕೆ ಕುಸಿಯಿತು. ನಮ್ಮದು ಯಾವುದೇ ಕಾರಣಕ್ಕೆ ಅಜಾಗರೂಕತೆಯಲ್ಲ. ಆಕಸ್ಮಿಕವಾಗಿ ನಡೆದ ಘಟನೆ ಇದು. 25 ವರ್ಷದಿಂದ ಈ ಕೆಲಸ ಮಾಡುತ್ತಿದ್ದೇನೆ. ಹಿಂದೆಂದೂ ಹೀಗಾಗಿಲ್ಲ. ಗದ್ದೆಯ ಮಣ್ಣು ಮೃದುವಾಗಿದ್ದರಿಂದ ನಾನು ಕುಸಿದು ಬಿದ್ದೆ ಎಂದರು.
ನನ್ನ ಎದೆಯ ಮಟ್ಟದವರೆಗೆ ಮಣ್ಣು ಬಿದ್ದಿತ್ತು. ನಾನೇ ಮೇಲೇಳಲು ಪ್ರಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ, ಈ ತರದ ಅನುಭವ ಇದೇ ಮೊದಲು ಎಂದು ಉಡುಪಿಯ ಕುಂದಾಪುರದಲ್ಲಿ ರೋಹಿತ್ ಹೇಳಿದರು.
ರೋಹಿತ್ ಖಾರ್ವಿ ರಕ್ಷಣೆ ಮಾಡಿದ ತಂಡಕ್ಕೆ ಬೈಂದೂರು ಬಿಜೆಪಿ ಶಾಸಕ ಸುಕುಮಾರ ಶೆಟ್ಟಿ ಪ್ರಶಸ್ತಿ ಘೋಷಣೆ ಮಾಡಿದ್ದಾರೆ. ಮರವಂತೆಯ ಅಗ್ನಿಶಾಮಕ ದಳದ ಕಾರ್ಯಾಚರಣೆಯಲ್ಲಿ ತೊಡಗಿದವರಿಗೆ 25 ಸಾವಿರ ನಗದು ನೀಡಿ, ಮರವಂತೆಯಲ್ಲೇ ಸನ್ಮಾನ ಮಾಡುತ್ತೇನೆ. ಇದು ನನ್ನ ವೈಯಕ್ತಿಕ ಮೊತ್ತ ಎಂದು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.
ಯುವಕ ರೋಹಿತ್ ಖಾರ್ವಿಗೆ ಯಾವುದೇ ಗಾಯವಾಗದಂತೆ ರಕ್ಷಣೆಯಾಗಿದೆ. ಕೊಲ್ಲೂರು ಮೂಕಾಂಬಿಕಾ ದೇವಿ ಎಲ್ಲರಿಗೂ ಶಕ್ತಿ ಕೊಟ್ಟಳು. ಅಗ್ನಿಶಾಮಕ, ಜಿಲ್ಲಾಡಳಿತ ಕಾರ್ಯ ಯಶಸ್ವಿಯಾಗಿದೆ. ಘಟನಾ ಸ್ಥಳದಲ್ಲಿ ಸ್ಥಳೀಯರು, ಮಾಧ್ಯಮಗಳು ನಿರಂತರ ಕೆಲಸ ಮಾಡಿವೆ. ಅವರೆಲ್ಲರಿಗೂ ಅಭಿನಂದನೆ ಎಂದು ಹೇಳಿದರು.