ಕಾರವಾರ: ಅರಬ್ಬಿ ಸಮುದ್ರದಲ್ಲಿ ಬೋಟ್ ಒಂದು ಮುಳುಗಡೆಯಾಗಿದ್ದು, 8 ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಮುರಡೇಶ್ವರ ಸಮೀಪದ ನೇತ್ರಾಣಿ ದ್ವೀಪದ ಬಳಿ ಈ ಘಟನೆ ಸಂಭವಿಸಿದೆ. ಮಂಗಳೂರು ಮೂಲದ ಬೋಟ್ ಇದಾಗಿದ್ದು, ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗಾಗಿ ಬೋಟ್ ತೆರಳಿತ್ತು. ಮೀನುಗಾರಿಕೆಯಿಂದ ಮರಳಿ ಮಂಗಳೂರಿಗೆ ವಾಪಸ್ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ನೇತ್ರಾಣಿ ದ್ವೀಪದ ಸಮೀಪ ಬೋಟ್ ಬರುತ್ತಿದ್ದಾಗ ಅಲ್ಲಿ ಕಲ್ಲು ಬಂಡೆಗೆ ಬೋಟ್ ಗುದ್ದಿದೆ. ಪರಿಣಾಮ ಬೋಟಿಗೆ ಹಾನಿಯಾಗಿ, ಸಮುದ್ರದಲ್ಲಿ ಮುಳುಗಿದೆ. ಬೋಟ್ ಮುಳುಗುತ್ತಿದ್ದಂತೆ ಎಚ್ಚೆತ್ತುಕೊಂಡ ಮೀನುಗಾರರು ಬೋಟ್ನಿಂದ ನೀರಿಗೆ ಹಾರಿ ದ್ವೀಪದ ದಡ ಸೇರಲು ಮುಂದಾಗಿದ್ದಾರೆ. ಈ ವೇಳೆ ಅವರನ್ನು ಕಂಡ ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿ ಸಹಾಯ ಮಾಡಿದ್ದಾರೆ.
ಈ ಬೋಟ್ ಸಮುದ್ರದಲ್ಲಿ ಮುಳುಗುತ್ತಿರುವ ದೃಶ್ಯವನ್ನು ಸ್ಥಳದಲ್ಲಿದ್ದವರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಈ ಬೋಟಿನಲ್ಲಿದ್ದ ಮೀನುಗಾರರು ಮೂಲತಃ ತಮಿಳುನಾಡಿನವರು ಎಂಬ ಮಾಹಿತಿ ಲಭ್ಯವಾಗಿದ್ದು, ಸದ್ಯ ಎಲ್ಲಾ ಮೀನುಗಾರರು ಸುರಕ್ಷಿತವಾಗಿದ್ದಾರೆ. ಸ್ಥಳಕ್ಕೆ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಬಂದು ಈ ಸಂಬಂಧ ಪರಿಶೀಲನೆ ನಡೆಸಲಿದ್ದಾರೆ ಎನ್ನಲಾಗಿದ್ದು, ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.