ಮುಂಬೈ: ಬಿಜೆಪಿ ಶಾಸಕ ರಾಮನಾಥ್ ಕದಮ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹುಡುಗಿಯರು ನಿಮ್ಮ ಪ್ರೀತಿಯನ್ನು ಒಪ್ಪಿಕೊಂಡಿಲ್ಲ ಅಂದ್ರೆ ನನಗೆ ಹೇಳಿ, ಆಕೆಯನ್ನು ಕಿಡ್ನಾಪ್ ನಾನು ಸಹಾಯ ಮಾಡ್ತೀನಿ ಎಂದು ಯುವಕರಿಗೆ ಭರವಸೆ ನೀಡಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ‘ಬೇಟಿ ಬಚಾವೋ, ಬೇಟಿ ಪಡಾವೋ’ ಎಂದು ಹೇಳ್ತಿದ್ದರೆ, ಇತ್ತ ಅವರದ್ದೇ ಪಕ್ಷದ ನಾಯಕರ ಈ ರೀತಿಯ ಹೇಳಿಕೆಗೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಪಶ್ಚಿಮ ಗೊಠಕ್ ಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ರಾಮ್ ಕದಮ್ ನೀಡಿರುವ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
‘ದಹೀ ಹಂಡಿ’ ಸಾರ್ವಜನಿಕ ಕಾರ್ಯಕ್ರಮದಲ್ಲಿ ಶಾಸಕರು ಭಾಗಿಯಾಗಿದ್ದರು. ಜನತೆಯನ್ನು ಕುರಿತು ಮಾತನಾಡುವಾಗ ಸ್ಥಳದಲ್ಲಿದ್ದ ಯುವಕನೋರ್ವ, ನಾನು ಒಬ್ಬ ಹುಡುಗಿಗೆ ಪ್ರಪೋಸ್ ಮಾಡಿದ್ದೀನಿ. ಆದ್ರೆ ಆಕೆ ಒಪ್ಪುತ್ತಿಲ್ಲ. ಈ ವಿವಾಚಾರದಲ್ಲಿ ನನಗೆ ನಿಮ್ಮ ಸಹಾಯ ಬೇಕಿದೆ ಅಂತಾ ಮನವಿ ಮಾಡಿಕೊಂಡಿದ್ದಾನೆ.
ಯುವಕನ ಮನವಿಗೆ ಪ್ರತಿಕ್ರಿಯಿಸಿದ ರಾಮ್ ಕದಮ್, ನಾನು ನಿನಗೆ ನೂರಕ್ಕೆ ನೂರರಷ್ಟು ಸಹಾಯ ಮಾಡ್ತೀನಿ. ಮೊದಲು ನನ್ನೊಂದಿಗೆ ನಿನ್ನ ಪೋಷಕರನ್ನು ಭೇಟಿ ಮಾಡಿಸು, ಅಲ್ಲಿ ಅವರು ಒಪ್ಪಿಕೊಂಡರೆ ಮುಂದೆ ಏನು ಮಾಡಬೇಕೆಂದು ನಿರ್ಣಯಿಸಬಹುದು ಅಂತಾ ಹೇಳಿದ್ದಾರೆ. ಇದೇ ಗುಂಪಿನಲ್ಲಿ ಮತ್ತೊಬ್ಬ ಯುವಕ, ಹಾಗಾದ್ರೆ ನಾವು ಪ್ರೀತಿಸಿದ ಹುಡುಗಿ ಜೊತೆ ನಮ್ಮ ಮದುವೆ ಮಾಡಿಸ್ತೀರಾ ಎಂದು ಪ್ರಶ್ನಿಸಿದ್ದಾನೆ. ಕೂಡಲೇ ಶಾಸಕರು, ನೀವು ಆಕೆಯನ್ನು ಅಪಹರಿಸಲು ನಿಮಗೆ ಸಹಾಯ ಮಾಡ್ತೀನಿ. ಬೇಕಾದ್ರೆ ಎಲ್ಲ ಯುವಕರು ನನ್ನ ಮೊಬೈಲ್ ನಂಬರ್ ತೆಗೆದುಕೊಳ್ಳಿ. ಯಾವುದೇ ಸಮಯದಲ್ಲಿ ನನಗೆ ಕರೆ ಮಾಡಿ ಸಹಾಯ ಕೇಳಬಹುದು ಎಂದು ತಮ್ಮ ಮೊಬೈಲ್ ನಂಬರ್ ನೀಡಿದ್ದಾರೆ
ಹೇಳಿಕೆಗೆ ಸ್ಪಷ್ಟನೆ:
ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಾಮ್ ಕದಮ್, ಸಾರ್ವಜನಿಕ ಕಾರ್ಯಕ್ರಮದಲ್ಲಿ ಎಲ್ಲರೂ ಸಂತೋಷದಿಂದ ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ಸ್ಥಳೀಯ ಯುವಕರನ್ನು ಕುರಿತು ಮಾತನಾಡಿದ್ದೇನೆ. ಆದ್ರೆ ವೈರಲ್ ಆಗಿರುವ ವಿಡಿಯೋದಲ್ಲಿ ನಾನು ಮಾತನಾಡಿದ ಹಿಂದಿನ ಹಾಗು ಮುಂದಿನ ದೃಶ್ಯಗಳನ್ನು ಕಟ್ ಮಾಡಿ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv