ಯಾದಗಿರಿಯಲ್ಲಿ ಚಾಕುವಿನಿಂದ ಇರಿದು ಬಿಜೆಪಿ ಕಾರ್ಯಕರ್ತ ಹತ್ಯೆ

Public TV
2 Min Read
bjp worker yadagiri

ಯಾದಗಿರಿ: ಹೋಟೆಲ್‌ಗೆ ಊಟ ಮಾಡಲೆಂದು ಸ್ನೇಹಿತರ ಜೊತೆ ತೆರಳಿದ್ದ ಬಿಜೆಪಿ ಕಾರ್ಯಕರ್ತ ಹೋಟೆಲ್ ಕೆಲಸಗಾರನಿಂದಲೇ ಹತ್ಯೆಯಾಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಜಗಳ ಬಿಡಿಸಲು ಹೋದ ವ್ಯಕ್ತಿ ಶ್ರೀನಿವಾಸನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಘಟನೆ ಖಂಡಿಸಿ ಬಿಜೆಪಿ (BJP) ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆಯೂ ನಡೆದಿದೆ.

ಇದೇ ಸೋಮವಾರ ರಾತ್ರಿ ಯಾದಗಿರಿ (Yadagiri) ನಗರದ ರಾಯಲ್ ಗಾರ್ಡನ್‌ಗೆ ಬಿಜೆಪಿ ಕಾರ್ಯಕರ್ತ ಶ್ರೀನಿವಾಸ ಹಾಗೂ ಸ್ನೇಹಿತರು ಊಟಕ್ಕೆಂದು ಹೋಗಿದ್ದರು. ಇನ್ನೇನು ಊಟ ಮುಗಿಸಿ ವಾಪಸ್ ಬರಬೇಕು ಎನ್ನುವಷ್ಟರಲ್ಲಿ ಪಾರ್ಕಿಂಗ್ ಮಾಡಿದ್ದ ಕಾರು ತೆಗೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀನಿವಾಸ ಸ್ನೇಹಿತರ ಜೊತೆ ರಾಯಲ್ ಗಾರ್ಡನ್ ಹೋಟೆಲ್ ಮಾಲೀಕರ ಜಗಳ ಆರಂಭವಾಗಿದೆ. ಗಲಾಟೆ ಆಗೋದನ್ನ ಕಂಡಿದ್ದ ಶ್ರೀನಿವಾಸ ಜಗಳ ಬಿಡಿಸಲು ಹೋಗಿದ್ದಾನೆ. ಇದೇ ವೇಳೆ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ, ಮಹಮದ್ ಅನಾಸ್ ಹಾಗೂ ನಾಲ್ಕೈದು ಜನ ಏಕಾಏಕೀ ಬಂದು ಚಾಕುವಿನಿಂದ ಶ್ರೀನಿವಾಸನ ಹೊಟ್ಟೆಗೆ ಇರಿದಿದ್ದಾರೆ. ಶ್ರೀನಿವಾಸ ಸ್ಥಳದಲ್ಲೇ ಕುಸಿದು ಬಿದ್ದು, ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಗೂಂಡಾ ರಾಜ್ಯ ಆಗಿ ಬದಲಾವಣೆ: ಕಟೀಲ್ ಕಿಡಿ

bjp flag

ಕೊಲೆಯಾದ ಶ್ರೀನಿವಾಸ ಯಾದಗಿರಿಯ ಗಾಂಧಿ ವೃತ್ತದ ಸಮೀಪದ ಮನೆ ಮುಂಭಾಗದಲ್ಲಿ ಹೋಟೆಲ್ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಶ್ರೀನಿವಾಸನ ಪತ್ನಿ ಹಾಗೂ ಮಕ್ಕಳಿಬ್ಬರು ರಜೆ ನಿಮಿತ್ತ ಊರಿಗೆ ಹೋಗಿದ್ದರು. ಹೀಗಾಗಿ ಮನೆಯಲ್ಲಿ ಯಾರೂ ಇಲ್ಲದ್ದಕ್ಕೆ ಹೋಟೆಲ್‌ಗೆ ಊಟಕ್ಕೆ ತೆರಳಿ ಜಗಳ ಬಿಡಿಸಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ. ತನ್ನ ಕಾರ್ಯಕರ್ತ ಅನ್ಯಕೋಮಿನವರಿಂದ ಕೊಲೆಯಾಗಿದ್ದಕ್ಕೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ರೊಚ್ಚಿಗೆದ್ದು ಪ್ರತಿಭಟನೆಗಿಳಿದಿದ್ದಾರೆ. ಬಿಜೆಪಿ ಕಾರ್ಯಕರ್ತ ಶ್ರೀನಿವಾಸನನ್ನ ಕೊಲೆ ಮಾಡಿರುವವರಿಗೆ ಗಲ್ಲು ಶಿಕ್ಷೆ ನೀಡಬೇಕು. ಮೃತ ಕುಟುಂಬಸ್ಥರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ನಾಯಕರ ದಂಡು ನಾಳೆ ಯಾದಗಿರಿಗೆ ಆಗಮಿಸಲಿದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೆ.ಎಸ್.ಈಶ್ವರಪ್ಪ ಆಗಮಿಸಿ, ಮೃತನ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ. ಘಟನೆಯ ಕುರಿತು ಈಗಾಗಲೇ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರು ಜನ ಆರೋಪಿಗಳನ್ನ ಬಂಧಿಸಲಾಗಿದೆ. ಇದನ್ನೂ ಓದಿ: ನಾನ್ಯಾಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿ?: ಡಿಕೆಶಿ ಗರಂ

Share This Article