ಚಿಕ್ಕಮಗಳೂರು: ಟಿಕೆಟ್ ಸಿಗದ ಹಿನ್ನೆಲೆ ಮನನೊಂದು ಬಿಜೆಪಿ ಕಾರ್ಯಕರ್ತನೋರ್ವ (BJP Worker) 100 ಅಡಿ ಎತ್ತರದ ಟವರ್ (Tower) ಏರಿ ಆತ್ಮಹತ್ಯೆಯ ಬೆದರಿಕೆ ಒಡ್ಡಿರುವ ಘಟನೆ ಜಿಲ್ಲೆಯ ಅಜ್ಜಂಪುರ (Ajjampur) ತಾಲೂಕಿನ ಶಿವನಿ ರೈಲ್ವೆ ಸ್ಟೇಷನ್ ಬಳಿ ನಡೆದಿದೆ.
ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಸಿರುವ ರಂಗಪ್ಪ ಬೋವಿಯನ್ನು ಕೆಳಗಿಳಿಸಲು ಪೊಲೀಸರು ಹಾಗೂ ಸ್ಥಳೀಯರು ಹರಸಹಾಸಪಡುತ್ತಿದ್ದಾರೆ. ಟಿವಿಯವರು ಬಂದು ಮುಖ ಹಾಗೂ ಲೋಗೋ ತೋರಿಸುವವರೆಗೂ ನಾನು ಕೆಳಗೆ ಇಳಿಯುವುದಿಲ್ಲ ಎಂದು ರಂಗಪ್ಪ ಹಠಕಟ್ಟಿದ್ದಾನೆ.
ನಾನು ಚುನಾವಣೆಗೆ ಸ್ಪರ್ಧಿಸಿದರೆ ಬಿಜೆಪಿಯಿಂದಲೇ ಸ್ಪರ್ಧಿಸಬೇಕು. ಎಸ್ಸಿ, ಎಸ್ಟಿ ಸಮಾಜಕ್ಕೆ ಮುಂದೆ ಆಗುತ್ತದೆ ಎಂದು ಹೇಳುವುದಕ್ಕಿಂತ ಹಿಂದಿನಿಂದಲೂ ಕೂಡ ಅನ್ಯಾಯವಾಗಿದೆ. ದಲಿತ ಜನರಲ್ಲಿ ಒಗ್ಗಟ್ಟಿಲ್ಲ ಎಂಬ ಭಾವನೆ ಮೂಡಿದೆ. ನೀವೆಲ್ಲ ಸೇರಿ ನನ್ನನ್ನು ಉಳಿಸಿಕೊಳ್ಳುವುದಾದರೆ ಉಳಿಸಿಕೊಳ್ಳಿ. ಇಲ್ಲವಾದರೆ ಕೆಳಗೆ ಬೀಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: 10 ಸಾವಿರ ಮನೆಗಳಲ್ಲಿ ಭಿಕ್ಷೆ ಬೇಡಿ ನಾಮಪತ್ರ ಸಲ್ಲಿಕೆ – ನಾಣ್ಯ ಎಣಿಸಿ ಸುಸ್ತಾದ ಅಧಿಕಾರಿಗಳು
ನನ್ನನು ಏಳುವರೆ ವರ್ಷದ ಹಿಂದೆ ಕರೆದರು. ನೋಡೋದಕ್ಕೆ ಒಳ್ಳೆಯ ಆಳು. ನಿನ್ನನ್ನು ನೋಡಿದರೆ ಜನ ಹೆದರುತ್ತಾರೆ, ಹಣ ಕೊಡುತ್ತಾರೆ. ರೌಡಿಸಂ ಹಾಗೂ ರಿಯಲ್ ಎಸ್ಟೇಟ್ಗೆ ಬಾ ಎಂದು ಕರೆದರು. ಆದರೆ ನಾನು ಹೋಗಲಿಲ್ಲ. ನನಗೆ ಡಿಗ್ರಿ ಹಾಗೂ ಡಬಲ್ ಡಿಗ್ರಿ ಓದಿರುವ ಮೂವರು ಮಕ್ಕಳಿದ್ದಾರೆ. ಅವರಿಗೂ ಕೂಡಾ ಫೋನ್ ಆಪರೇಷನ್ ಮೂಲಕ ಕೆಲಸ ಸಿಗದಂತೆ ಮಾಡಿದ್ದಾರೆ. ನನ್ನ ಖಾತೆಯಲ್ಲಿದ್ದ ಹಣವನ್ನೂ ಹ್ಯಾಕ್ ಮಾಡಿದ್ದಾರೆ. ನಾನು ಶಿಕ್ಷಕರು, ಸೈನಿಕರು, ಆರಕ್ಷಕರಿಗೆ ತುಂಬಾ ಬೆಲೆ ಕೊಡುತ್ತೇನೆ. ನಾನು ಸತ್ತರೂ ಕೂಡ ನನ್ನ ಮಕ್ಕಳಿಗಾದರೂ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾನೆ.
ನನಗಾದ ನೋವು ಬೇರೆ ಯಾವ ಸಣ್ಣ ಹಾಗೂ ಬಡ ಸಮಾಜಗಳಿಗೆ ಆಗಬಾರದು ಎಂದು ಹೇಳಿದ್ದು, ಟವರ್ ಹತ್ತಿ ವೀಡಿಯೋ ರೆಕಾರ್ಡ್ ಮಾಡಿದ್ದಾನೆ. ವೀಡಿಯೋದಲ್ಲಿ ಆತ ಉದ್ಭವ ಆಂಜನೇಯ ಸ್ವಾಮಿ, ನಿರಂಜನ ಸ್ವಾಮೀಜಿಗೆ ವಂದನೆ ತಿಳಿಸಿದ್ದಾನೆ. ಆತನನ್ನು ಟವರ್ನಿಂದ ಕೆಳಗಿಳಿಸಲು ಅಜ್ಜಂಪುರ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ: ಶೆಟ್ಟರ್ ನಿರ್ಧಾರದಿಂದ ಉಂಟಾದ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾದ ಜೆ.ಪಿ ನಡ್ಡಾ