ಶ್ರೀನಗರ: ಕರ್ನಾಟಕದಲ್ಲಿ ಭುಗಿಲೆದ್ದಿರುವ ಹಿಜಬ್ ವಿವಾದ ಕುರಿತು ಕಳೆದ ವಾರವಷ್ಟೇ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮತ್ತೆ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಹಿಜಬ್ ವಿವಾದ ಕುರಿತು ಭಾನುವಾರ ಮಾತನಾಡಿದ ಅವರು, ಹಿಜಬ್ ಸೇರಿದಂತೆ ಮುಸಲ್ಮಾನರ ಎಲ್ಲಾ ಚಿಹ್ನೆಗಳನ್ನು ನಾಶ ಮಾಡಲು ಬಿಜೆಪಿ ಹೊರಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹೆಲ್ಮೆಟ್ ಹಾಕಿದ್ರೆ ಸೇಫ್ಟಿ ಅಲ್ವಾ ಅದ್ಕೆ ಹಿಜಬ್ ಹಾಕಿದ್ರೆ ಸೇಫ್ಟಿ ಅಂದಿದ್ದು: ಜಮೀರ್ ಸಮರ್ಥನೆ
ಹಿಜಬ್ ವಿವಾದವನ್ನು ಬಿಜೆಪಿ ಕೊನೆಗಾಣಿಸದಿರುವುದು ಆತಂಕ ಮೂಡಿಸಿದೆ. ಮುಸ್ಲಿಮರ ಇತರ ಚಿಹ್ನೆಗಳನ್ನು ಅಳಿಸಿ ಹಾಕುವುದಕ್ಕಾಗಿಯೇ ಬಿಜೆಪಿಯವರು ಬಂದಿದ್ದಾರೆ. ಭಾರತದ ಮುಸಲ್ಮಾನರು, ಭಾರತೀಯರಾದರೆ ಸಾಕಾಗುವುದಿಲ್ಲ. ಅವರು ಬಿಜೆಪಿಯಾಗಿರಬೇಕು ಎಂದು ಬಿಜೆಪಿ ವಿರುದ್ಧ ಮುಫ್ತಿ ವಾಗ್ದಾಳಿ ನಡೆಸಿದ್ದಾರೆ.
ಭಾರತೀಯ ಸಂವಿಧಾನವು ನೀಡಿರುವ ಹಕ್ಕುಗಳನ್ನು ವಿರೂಪಗೊಳಿಸಲಾಗುತ್ತಿದೆ. ಬಿಜೆಪಿಯವರು ಜಮ್ಮು ಮತ್ತು ಕಾಶ್ಮೀರದ ಜನರನ್ನು ಪಂಥೀಯ ಮಟ್ಟದಲ್ಲಿ, ಸಾಮಾಜಿಕ ಮಟ್ಟದಲ್ಲಿ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ಪರಿಣಾಮವಾಗಿ ಇಲ್ಲಿನ ಜನರು ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ಪಕ್ಷವು, ಪಂಥೀಯ ಮತ್ತು ಸಾಮಾಜಿಕ ವಿಭಜನೆ ವಿರುದ್ಧ ಹೋರಾಡುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಹೃದಯದಿಂದ ಮುಸ್ಲಿಂ ಮಗಳು, ಹಿಜಬ್ನಿಂದಲ್ಲ: ಕಾಶ್ಮೀರ ಟಾಪರ್