ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದರೆ, ಹೈದರಾಬಾದ್ ನಗರದ ಹೆಸರನ್ನು ಭಾಗ್ಯನಗರವನ್ನಾಗಿ ಮರುನಾಮಕರಣ ಮಾಡುತ್ತೇವೆಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಚುನಾವಣಾ ಪ್ರಚಾರ ನಿಮಿತ್ತ ತೆಲಂಗಾಣದ ಘೋಶ್ಮಹಲ್ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹೈದರಾಬಾದಿಗೆ ಈ ಮೊದಲು ಭಾಗ್ಯನಗರ ಎಂದೇ ಹೆಸರಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಮೇಲೆ ದಾಳಿ ನಡೆಸಿದ್ದ ಕಿಲ್ ಕುತುಬ್ ಶಾ ಈ ನಗರವನ್ನು ಹೈದರಾಬಾದ್ ಎಂದು ಬದಲಾಯಿಸಿದ್ದ. ಅಲ್ಲದೇ ಅದೇ ವೇಳೆ ಕುತುಬ್ ಹಿಂದೂಗಳ ಮೇಲೆಯೂ ದಾಳಿ ನಡೆಸಿ, ದೇವಾಲಯಗಳನ್ನೆಲ್ಲಾ ನಾಶ ಮಾಡಿದ್ದ. ಹೀಗಾಗಿ ಹೈದರಾಬಾದ್ಗೆ ಪುನಃ ಭಾಗ್ಯನಗರವನ್ನಾಗಿ ಮಾಡುತ್ತೇವೆಂದು ಘೋಷಿಸಿದ್ದಾರೆ.
ಕಳೆದ ತಿಂಗಳು ಘೋಶ್ಮಹಲ್ ಕ್ಷೇತ್ರದ ಬಿಜೆಪಿ ಶಾಸಕ ರಾಜಾಸಿಂಗ್ ಕೂಡ ಇದೇ ಹೇಳಿಕೆ ನೀಡಿದ್ದರು. ಅಲ್ಲದೇ ಸಿಕಂದರಬಾದ್ ಹಾಗೂ ಕರೀಂನಗರ ಜಿಲ್ಲೆಗಳ ಹೆಸರನ್ನು ಸಹ ಬದಲಾಯಿಸುವ ಕುರಿತು ಮಾತನಾಡಿದ್ದರು.
ಯೋಗಿ ಆದಿತ್ಯನಾಥ್ ಈಗಾಗಲೇ ಉತ್ತರಪ್ರದೇಶದಲ್ಲಿನ ಫೈಜಾಬಾದ್ ನಗರವನ್ನು ಅಯೋಧ್ಯೆಯೆಂದು ಹಾಗೂ ಅಲಹಾಬಾದ್ ಜಿಲ್ಲೆಗೆ ಪ್ರಯಾಗ್ರಾಜ್ ಎಂದು ಮರುನಾಮಕರಣ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv