ಮುಂಬೈ: ಬಿಜೆಪಿಗೆ ಮಾತನಾಡಲು ಯಾವುದೇ ವಿಷಯಗಳಿಲ್ಲದ ಕಾರಣ ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳಲ್ಲಿ ಬಹುಮತ ಕಳೆದುಕೊಳ್ಳಲಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಭಾರತೀಯ ಜನತಾ ಪಕ್ಷವನ್ನು ವ್ಯಂಗ್ಯವಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಚುನಾವಣೆ ವೇಳೆ ರಾಮಮಂದಿರ ನಿರ್ಮಾಣದ ವಿಚಾರವಾಗಿ ಚರ್ಚೆ ನಡೆದಿತ್ತು. ಈಗ ರಾಮಮಂದಿರ ನಿರ್ಮಿಸಿದ್ದರಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ ಇತ್ತೀಚೆಗೆ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ ಭಯೋತ್ಪಾದಕರೊಂದಿಗೆ ಸಂಬಂಧ ಹೊಂದಿದೆ ಎಂದು ಮೋದಿ ಅವರು ಆರೋಪಿಸಿದ್ದಾರೆ. ಇದರಿಂದ ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳಲ್ಲಿ ಬಿಜೆಪಿಗೆ ಬಹುಮತ ಸಿಗುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದ – ಶೀರೂರು ಮಠ, ಶಬರಿ ಮಲೆ, ತ್ರಿವಳಿ ತಲಾಖ್ ಪ್ರಕರಣ ಪ್ರಸ್ತಾಪಿಸಿ ಎಜಿ ವಾದ
ಈ ಆರೋಪಗಳಿಗೆ ಯಾವುದಾದರೂ ಪುರಾವೆ ಮೋದಿಯವರ ಬಳಿ ಇದ್ದರೆ, ಅವರು ಅದನ್ನು ಸಾಬೀತುಪಡಿಸಬೇಕು. ಪುರಾವೆಗಳಿಲ್ಲದೇ ಬೇರೆ ವಿಚಾರ ಮಾತನಾಡಬಾರದು. ಮಾತನಾಡಲು ನಿರುದ್ಯೋಗದಂತಹ ಮೂಲಭೂತ ಸಮಸ್ಯೆಗಳಿದೆ. ಆದರೆ ಅದರ ಬಗ್ಗೆ ಮಾತನಾಡುವುದಿಲ್ಲ. ಸಾರ್ವಜನಿಕ ರ್ಯಾಲಿಗಳನ್ನು ನಡೆಸುವ ವೇಳೆ ತಾವೇ ಸೃಷ್ಟಿಸಿರುವ ಚೀನಾ ಗಡಿ ವಿವಾದವಿದೆ. ಆದರೆ ಅದರ ಬಗ್ಗೆ ಮಾತನಾಡುವುದಿಲ್ಲ. ಈಗಾಗಲೇ ಕೆಲವು ಅರ್ಥಶಾಸ್ತ್ರಜ್ಞರು, ಎನ್ಜಿಒಗಳು ಮೋದಿ ಸರ್ವಾಧಿಕಾರಿಯಾಗಲು ಬಯಸುವುದರಿಂದ ಇದು ಪ್ರಜಾಪ್ರಭುತ್ವಕ್ಕೆ ಅಪಾಯ ಎಂದು ಭವಿಷ್ಯ ನುಡಿದಿದ್ದಾರೆ ಎಂದು ಹೇಳಿದ್ದಾರೆ.
ಪಂಜಾಬ್, ಉತ್ತರಾಖಂಡ ಮತ್ತು ಗೋವಾದಲ್ಲಿ ಮತದಾನ ನಡೆದಿದ್ದು, ಯುಪಿ ವಿಧಾನಸಭಾ ಚುನಾವಣೆಯ ಏಳು ಹಂತಗಳ ಮತದಾನದಲ್ಲಿ ಮೂರು ಹಂತ ಮತದಾನ ಪೂರ್ಣಗೊಂಡಿವೆ ಮತ್ತು ಉಳಿದ ಹಂತದ ಮತದಾನ ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7 ರಂದು ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಮತ್ತು ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ಹಿಜಬ್ ಹೆಸರಿನಲ್ಲಿ ಮಕ್ಕಳಿಗೆ ವಿಭಜನೆ ವಿಷವನ್ನು ತಿನ್ನಿಸಬಾರದು: ಸದ್ಗುರು ಜಗ್ಗಿ ವಾಸುದೇವ್