ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 400 ಸ್ಥಾನಗಳ ಗಡಿ ದಾಟುತ್ತೆ.. ಬಿಜೆಪಿಗೆ 370 ಸೀಟು ಬರುತ್ತೆ: ಮೋದಿ ಭವಿಷ್ಯ

Public TV
3 Min Read
modi lok sabha

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 400 ಸ್ಥಾನಗಳ ಗಡಿ ದಾಟಲಿದೆ. ಬಿಜೆಪಿಗೆ 370 ಸೀಟು ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಭವಿಷ್ಯ ನುಡಿದಿದ್ದಾರೆ.

ನಮ್ಮ ಸರ್ಕಾರದ ಮೂರನೇ ಅವಧಿ ಈಗ ಬಹಳ ದೂರವಿಲ್ಲ. ಇನ್ನು ಕೇವಲ 100-125 ದಿನಗಳು ಉಳಿದಿವೆ. ನಾನು ಅಂಕಿಅಂಶಗಳಿಗೆ ಹೋಗುವುದಿಲ್ಲ. ಆದರೆ ನಾನು ದೇಶದ ಮನಸ್ಥಿತಿಯನ್ನು ನೋಡುತ್ತೇನೆ. ಇದು ಎನ್‌ಡಿಎಯನ್ನು 400 ದಾಟುವಂತೆ ಮಾಡುತ್ತದೆ. ಬಿಜೆಪಿ ಖಂಡಿತವಾಗಿಯೂ 370 ಸ್ಥಾನಗಳನ್ನು ಪಡೆಯುತ್ತದೆ. ಮೂರನೇ ಅವಧಿಯು ಬಹಳ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಅಬ್ ಕೀ ಬಾರ್ 400 ಪಾರ್ ಇಡೀ ದೇಶ ಹೇಳುತ್ತಿದೆ. ಖರ್ಗೆ ಅವರು ಇದನ್ನೇ ಹೇಳುತ್ತಿದ್ದಾರೆ ಎಂದು ಟಾಂಗ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ನಮ್ಮ 3ನೇ ಅವಧಿಯಲ್ಲಿ ಭಾರತ ವಿಶ್ವದ ಮೂರನೇ ದೊಡ್ಡ ಆರ್ಥಿಕತೆಯ ದೇಶವಾಗಲಿದೆ: ಮೋದಿ ಭರವಸೆ

lok sabha bjp leaders

ಕಾಂಗ್ರೆಸ್ ಪಕ್ಷ ಮತ್ತು ಯುಪಿಎ ಸರ್ಕಾರವು ಒಬಿಸಿಗಳಿಗೆ ನ್ಯಾಯ ನೀಡಲಿಲ್ಲ. ಕೆಲವು ದಿನಗಳ ಹಿಂದೆ ನಮ್ಮ ಸರ್ಕಾರ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡಲಾಯಿತು. ಓಬಿಸಿ ಸಮುದಾಯಕ್ಕೂ ಕಾಂಗ್ರೆಸ್ ಅನ್ಯಾಯ ಮಾಡಿದೆ. 1970 ರಲ್ಲಿ ಬಿಹಾರ ಸಿಎಂ ಆಗಿದ್ದರು. ಅವರ ಸರ್ಕಾರ ಅಸ್ಥಿರ ಮಾಡಲು ಕಾಂಗ್ರೆಸ್ ಪ್ರಯತ್ನಿಸಿತು. 1987 ರಲ್ಲಿ ಇಡೀ ದೇಶದಲ್ಲಿ ಕಾಂಗ್ರೆಸ್ ಧ್ವಜ ಇತ್ತು. ಸರ್ಕಾರದಲ್ಲಿ ಓಬಿಸಿ ಜನರು ಎಷ್ಟಿದ್ದಾರೆ ಎಂದು ಈಗ ಲೆಕ್ಕ ಹಾಕುತ್ತಿದ್ದಾರೆ. ನಾನು ಓಬಿಸಿ, ಅವರಿಗೆ ಕಾಣುತ್ತಿಲ್ಲ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮುಂದಿನ ದಿನಗಳಲ್ಲಿ ಮೂರು ಕೋಟಿ ‘ಲಕ್ಷಾಧಿಪತಿ ಸಹೋದರಿಯರನ್ನು’ ತಯಾರು ಮಾಡುತ್ತೇವೆ. ಇದು ಗ್ರಾಮೀಣ ಆರ್ಥಿಕತೆಯನ್ನು ಶಕ್ತಿಶಾಲಿ ಮಾಡಲಿದೆ. ಮೊದಲು ಹೆಣ್ಣು ಮಗುವಾದರೆ ಖರ್ಚು ಹೇಗೆ? ನಿಭಾಯಿಸುವುದು ಹೇಗೆ ಎಂದು ಚರ್ಚೆಯಾಗುತ್ತಿತ್ತು. ಈಗ ಸುಕನ್ಯಾ ಸಮೃದ್ಧಿ ಅಕೌಂಟ್ ತರೆಯುವ ಬಗ್ಗೆ ಚರ್ಚೆಯಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 10 ವರ್ಷಗಳಲ್ಲಿ ಬಿಜೆಪಿಯಿಂದಾದ ಅಭಿವೃದ್ಧಿ ಕೆಲಸ ಮಾಡಲು ಕಾಂಗ್ರೆಸ್‌ಗೆ 100 ವರ್ಷ ಬೇಕಾಗುತ್ತೆ: ಮೋದಿ ವ್ಯಂಗ್ಯ

narendra modi

ರೈತರೊಂದಿಗೆ ವಿಶ್ವಾಸಘಾತ ಕೆಲಸ‌ವನ್ನು ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್ ಅವಧಿಯಲ್ಲಿ 25,000 ಕೋಟಿ ಕೃಷಿ ಬಜೆಟ್ ಇತ್ತು. ನಮ್ಮ ಸರ್ಕಾರದಲ್ಲಿ 2.5 ಲಕ್ಷ ಕೋಟಿ ಕೃಷಿಗೆ ಮೀಸಲಿಡಲಾಗಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಬಗ್ಗೆ ಸುಳ್ಳು ಸುದ್ದಿ ಹರಡಲಾಯಿತು. ಈ ಯೋಜನೆಯಲ್ಲಿ 2.80 ಲಕ್ಷ ಕೋಟಿ ಹಣ ನೀಡಿದೆ. ಫಸಲ್ ಭಿಮಾ ಯೋಜನೆ ಯಶಸ್ವಿಯಾಗಿ ಜಾರಿಯಾಗಿದೆ. ರೈತರು ಅದರ ಲಾಭ ಪಡೆಯುತ್ತಿದ್ದಾರೆ. ಪಶು ಸಂಗೋಪನೆ ಮತ್ತು ಮೀನುಗಾರಿಗೆ ಮೊದಲ ಬಾರಿಗೆ ಪ್ರತ್ಯೇಕ ಸಚಿವಾಲಯ ಮಾಡಲಾಯಿತು ಎಂದು ಹೇಳಿದ್ದಾರೆ.

ಹತ್ತು ವರ್ಷದಲ್ಲಿ ಪ್ರವಾಸೋದ್ಯಮದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಸಾಕಷ್ಟು ಉದ್ಯೋಗ ನಿರ್ಮಾಣವಾಗಿದೆ. ಹತ್ತು ವರ್ಷದಲ್ಲಿ ಎರಡು ಪಟ್ಟು ದ್ವಿಗುಣ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ವಿಮಾನಯಾನದಲ್ಲಿ ಭಾರತ ಮೂರನೇ ದೊಡ್ಡ ದೇಶವಾಗಿದೆ. ಭಾರತದಲ್ಲಿನ ಕಂಪನಿ ಒಂದು ಸಾವಿರ ವಿಮಾನ‌ ನಿರ್ಮಾಣಕ್ಕೆ ಆರ್ಡರ್ ನೀಡಿದೆ. ಇದರಿಂದ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅನುದಾನ ಹಂಚಿಕೆಯಲ್ಲಿ ರಾಜ್ಯಗಳ ನಡುವೆ ತಾರತಮ್ಯ ಸಾಧ್ಯವಿಲ್ಲ: ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

8 ಕೋಟಿ ಜನರು ಮೊದಲ ಬಾರಿಗೆ ಮುದ್ರಾ ಲೋನ್ ಪಡೆದು ವ್ಯಾಪಾರ ಶುರು ಮಾಡಿದ್ದಾರೆ. ಲಕ್ಷಾಂತರ ಬೀದಿಬದಿ ವ್ಯಾಪಾರಿಗಳಿಗೆ ನೆರವು ನೀಡಿದ್ದೇವೆ. ಹಸಿರು ಶಕ್ತಿಗೆ ನಾವು ಹೆಚ್ಚು ಆದ್ಯತೆ ನೀಡುತ್ತಿದ್ದೇವೆ. ಸೆಮಿ ಕಂಡಕ್ಟರ್ ಬಗ್ಗೆಯೂ ಸರ್ಕಾರ ಗಂಭೀರವಾಗಿ ಕೆಲಸ‌ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಸೆಮಿ ಕಂಡಕ್ಟರ್ ವಲಯದಲ್ಲಿ ಭಾರತ ನಿರ್ಣಾಯಕವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಸಂಸ್ಥೆಗಳು ಕ್ರಮ ತೆಗೆದುಕೊಳ್ಳುತ್ತಿವೆ. ಅದಕ್ಕೂ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಸಂಸತ್‌ನಲ್ಲಿ ಭ್ರಷ್ಟಾಚಾರದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಭ್ರಷ್ಟಾಚಾರ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಗ್ರಹಿಸಲಾಗುತ್ತಿತ್ತು. ಆದರೆ ಇಂದು ಭ್ರಷ್ಟಾಚಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಆದರೆ ಅದನ್ನು ಸಮರ್ಥಿಸಿಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ. ಪಿಎಂಎಲ್‌ಎ ಎರಡುಪಟ್ಟು ದೂರು ದಾಖಲು ಮಾಡಿಕೊಂಡಿದೆ. ಕಾಂಗ್ರೆಸ್ ಅವಧಿಯಲ್ಲಿ 5,000 ಕೋಟಿ ವಶಪಡಿಸಿಕೊಂಡಿತ್ತು. ನಾವು ಒಂದು ಲಕ್ಷ ಕೋಟಿಗೂ ಅಧಿಕ ಆಸ್ತಿ ವಶಪಡಿಸಿಕೊಂಡಿದ್ದೇವೆ ಎಂದು ವಿಪಕ್ಷಗಳ ಆರೋಪಕ್ಕೆ ಟಾಂಗ್‌ ಕೊಟ್ಟಿದ್ದಾರೆ.

Share This Article