ಬೆಂಗಳೂರು: ಬಹುಮತ ಸಾಬೀತಿನ ವೇಳೆ ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿ ಆಮಿಷ ಒಡ್ಡಿದ್ದ ಬಿಜೆಪಿಯವರ ಮೇಲೆ ಮೊದಲು ದಾಳಿಯಾಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದವರನ್ನೇ ಟಾರ್ಗೆಟ್ ಮಾಡಿ ದ್ವೇಷದ ದಾಳಿ ಮಾಡಿಸುತ್ತಿದ್ದಾರೆ. ಬಿಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಅವರ ಬಳಿ ಹಣ ಇಲ್ಲವೇ? ಅವರ ಮೇಲೆ ಯಾಕೆ ದಾಳಿ ಆಗಲ್ಲ ಎಂದು ಪ್ರಶ್ನಿಸಿದರು.
ಇದೇ ವೇಳೆ ಆರ್ಆರ್ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಲ್ಲಿ ಗೆಲ್ಲುತ್ತೇವೆ ಅನ್ನುವ ನಿರೀಕ್ಷೆ ಇತ್ತು. ನಿರೀಕ್ಷೆಯಂತೆ ಫಲಿತಾಂಶ ಬಂದಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನ ಒಪ್ಪಿಕೊಂಡು ಮತ ನೀಡಿದ್ದಾರೆ. ಇಂದಿನ ಗೆಲುವು ಸೇರಿ ಒಟ್ಟು 14 ಕ್ಷೇತ್ರಗಳಲ್ಲಿ ಕಾಂಗ್ರೆಸ್ ವಿಜಯ ಸಾಧಿಸಿದೆ. ಅಭಿವೃದ್ಧಿ ಕೆಲಸಗಳನ್ನು ರಾಜರಾಜೇಶ್ವರಿ ಕ್ಷೇತ್ರದ ಜನ ನೋಡಿ ಮುನಿರತ್ನ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಕ್ಷೇತ್ರದ ಜನರಿಗೆ ಹೃತ್ಪೂರ್ವಕವಾದ ಧನ್ಯವಾದಗಳು. ಅದೇ ರೀತಿಯಾಗಿ 20 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿರುವ ಮುನಿರತ್ನ ಅವರಿಗೆ ಅಭಿನಂದನೆ ತಿಳಿಸಿದರು.