ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಉತ್ತರ ಕರ್ನಾಟಕದಿಂದ ಸ್ಪರ್ಧಿಸಲಿದ್ದಾರೆಂಬ ಕೂಗು ಕೇಳಿ ಬಂದಿರುವ ಬೆನ್ನಲ್ಲೇ ಶುಕ್ರವಾರ ಬನಹಟ್ಟಿಯಲ್ಲಿ ಬೃಹತ್ ನೇಕಾರ ಸಮಾವೇಶ ನಡೆಯಲಿದೆ.
ತೇರದಾಳ ಮತಕ್ಷೇತ್ರದ ಬನಹಟ್ಟಿಯಲ್ಲಿ ಬಿಜೆಪಿ ಪಕ್ಷ ನೇಕಾರರ ಸಮಾವೇಶವನ್ನು ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಬನಹಟ್ಟಿ ನಗರದ ಎಸ್.ಆರ್.ಎ ಕಾಲೇಜು ಮೈದಾನದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ನೇಕಾರ ಸಮಾವೇಶವನ್ನ ಹಮ್ಮಿಕೊಳ್ಳಲಾಗಿದೆ.
ಯಡಿಯೂರಪ್ಪ ತೇರದಾಳದಿಂದ ಸ್ಪರ್ಧಿಸಬಹುದು ಎಂಬ ಸುದ್ದಿ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಈ ನೇಕಾರ ಸಮಾವೇಶ ಮತ್ತಷ್ಟು ಮಹತ್ವ ಪಡೆದುಕೊಂಡಿದ್ದು, ನೇಕಾರರ ಬೆಂಬಲ ಪರೀಕ್ಷೆಗೆ ಬಿಜೆಪಿ ಮುಂದಾಗಿದೆ.
ಈ ಸಮಾವೇಶದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಗೋವಿಂದ ಕಾರಜೋಳ ಸೇರಿದಂತೆ ವಿವಿಧ ಜಿಲ್ಲೆಗಳ ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ.
ಇನ್ನೂ, ನೇಕಾರ ನಾಯಕಿ ಎಂದೇ ಗುರುತಿಸಿಕೊಂಡಿದ್ದ ಸಚಿವೆ ಉಮಾಶ್ರೀ ತವರು ನೆಲದಲ್ಲೇ ಬಿಜೆಪಿ, ನೇಕಾರರ ಮತ ಸೆಳೆಯಲು ಬೃಹತ್ ನೇಕಾರರ ಸಮಾವೇಶಕ್ಕೆ ಮುಂದಾಗಿದ್ದು ತೀವ್ರ ಕುತೂಹಲ ಮೂಡಿಸಿದೆ. ಇತ್ತ ನೇಕಾರರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳೊಂದಿಗೆ ಬಿಜೆಪಿ ಸರ್ಕಾರದ ವಿರುದ್ಧ ಬ್ರಹ್ಮಾಸ್ತ್ರ ಬೀಸಲಿದೆ ಎಂದು ಮಾಜಿ ಶಾಸಕ ಸಿದ್ದು ಸವದಿ ತಿಳಿಸಿದ್ದಾರೆ.