ಯಾದಗಿರಿ: ಬಿಜೆಪಿ ಮುಖಂಡ ಡಾ. ಶರಣ ಭೂಪಲಾರೆಡ್ಡಿ ಅವರು ತಮ್ಮ ಕಾರಿಲ್ಲಿ ಪ್ರಯಾಣಿಸುವಾಗ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆಯು ಶಹಾಪುರ ಹೊರವಲಯದ ಸೀಮೆ ಮಾರಮ್ಮ ದೇವಸ್ಥಾನ ಬಳಿ ನಡೆದಿದೆ.
ಕ್ಷೇತ್ರದ ಪ್ರಬಲ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಡಾ.ಶರಣಭೂಪಲಾರೆಡ್ಡಿ ಹೊಸದಾಗಿ ಖರೀದಿಸಿದ್ದ ಫೋರ್ಡ್ ಎಂಡೆವರ್ ಕಾರಿನಲ್ಲಿ ಮನೆಯಿಂದ ದೇವಾಲಯಕ್ಕೆ ತೆರಳುವ ವೇಳೆ ಈ ಘಟನೆ ಸಂಭವಿಸಿದೆ.
ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆಯಲ್ಲಿ ಕಾರು ಧಗಧಗನೇ ಹೊತ್ತಿ ಉರಿದ ಪರಿಣಾಮ ಕೆಲಕಾಲ ಯಾದಗಿರಿ-ಶಹಾಪೂರ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.
ಕಾರಿನ ಎಂಜಿನ್ ನಲ್ಲಿನ ತಾಂತ್ರಿಕ ದೋಷದಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.